ಪದ್ಯ ೬೨: ದುಶ್ಯಾಸನನು ದ್ರೌಪದಿಯನ್ನು ಹೇಗೆ ಸಮೀಪಿಸಿದನು?

ಹರಿದನವ ಬೀದಿಯಲಿ ಬಿಡುದಲೆ
ವೆರಸಿ ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ
ತರುಣಿಯರು ಕಂಡಂಜಿ ಹೊಕ್ಕರು
ಸರಸಿಜಾಕ್ಷಿಯ ಮರೆಯನೀ ಖಳ
ನುರವಣಿಸಿದನು ರಾಹು ತಾರಾಧಿಪನ ತಗುಳ್ವಂತೆ (ಸಭಾ ಪರ್ವ, ೧೫ ಸಂಧಿ, ೬೨ ಪದ್ಯ)

ತಾತ್ಪರ್ಯ:
ದುರ್ಯೋಧನನಿಂದ ಅಪ್ಪಣೆಪಡೆದ ದುಶ್ಯಾಸನನು ಕೆದರಿದ ಕೂದಲನ್ನು ಹೊತ್ತು, ಬೀದಿಯಲ್ಲಿ ಅವೇಶದಿಂದ ಬಂದು ದ್ರೌಪದಿಯಿದ್ದ ಅರಮನೆಯನ ಬಳಿ ಬಂದನು, ಬಾಗಿಲ ದೂತರು ಅವನನ್ನು ತಡೆಯಲು ಮುಂದಾದರೆ ಅವರನ್ನು ಮೆಟ್ಟಿ ಕತ್ತಿಯಲ್ಲಿ ಚುಚ್ಚಿ ಮುನ್ನಡೆದನು, ಇವನ ಆವೇಶಕ್ಕೆ ಬೆದರಿದ ಸಖಿಯರು ದ್ರೌಪದಿಯ ಮೊರೆಹೊಕ್ಕು ಆಕೆಯ ಹಿಂಭಾಗದಲ್ಲಿ ಸೇರಿದರು, ಅವನು ರಾಹುವು ಚಂದ್ರನನ್ನು ಆವರಿಸುವ ಪರಿ ಬರುತ್ತಿದ್ದನು.

ಅರ್ಥ:
ಹರಿದ: ಚಲಿಸು; ಬೀದಿ: ಮಾರ್ಗ; ಬಿಡುದಲೆ: ಕೆದರಿದ ಕೂದಲು; ಎರಸಿ: ಹೊತ್ತು; ಸತಿ: ಹೆಂಗಸು; ಅರಮನೆ: ಆಲಯ; ಬಾಗಿಲ: ಕದ; ಚರ: ದಾಸ; ತಡೆ: ನಿಲ್ಲು; ಮೆಟ್ಟು: ತುಳಿ; ತಿವಿ: ಚುಚ್ಚು; ಕಠಾರಿ: ಕತ್ತಿ; ತರುಣಿ: ಹೆಂಗಸು; ಕಂಡು: ನೋಡಿ; ಅಂಜು: ಹೆದರು; ಹೊಕ್ಕು: ಸೇರು; ಸರಸಿಜಾಕ್ಷಿ: ಕಮಲದಂತ ಕಣ್ಣು; ಮರೆ: ಬಳಿ, ಹಿಂಭಾಗ; ಖಳ: ದುಷ್ಟ; ಉರವಣೆ: ಆತುರ, ಅವಸರ, ಗರ್ವ; ತಾರಾಧಿಪ: ಚಂದ್ರ; ತಾರೆ: ನಕ್ಷತ್ರ; ಅಧಿಪ: ಒಡೆಯ; ತಗುಳು: ಆವರಿಸು, ಮುತ್ತು;

ಪದವಿಂಗಡಣೆ:
ಹರಿದನವ +ಬೀದಿಯಲಿ +ಬಿಡುದಲೆ
ವೆರಸಿ+ ಸತಿ+ಅರಮನೆಯ +ಬಾಗಿಲ
ಚರರು+ ತಡೆದರೆ+ ಮೆಟ್ಟಿದನು +ತಿವಿದನು +ಕಠಾರಿಯಲಿ
ತರುಣಿಯರು +ಕಂಡ್+ಅಂಜಿ +ಹೊಕ್ಕರು
ಸರಸಿಜಾಕ್ಷಿಯ +ಮರೆಯನ್+ಈ+ ಖಳನ್
ಉರವಣಿಸಿದನು +ರಾಹು +ತಾರಾಧಿಪನ+ ತಗುಳ್ವಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಶುಭ್ರವಾದ ಚಂದ್ರನನ್ನು ರಾಹುವು ಆವರಿಸಿ ಚಂದ್ರನ ಬೆಳಕನ್ನು ಮುಚ್ಚುವಂತೆ – ರಾಹು ತಾರಾಧಿಪನ ತಗುಳ್ವಂತೆ
(೨) ದುಶ್ಯಾಸನ ಆವೇಶ – ಹರಿದನವ ಬೀದಿಯಲಿ ಬಿಡುದಲೆವೆರಸಿ; ಸತಿಯರಮನೆಯ ಬಾಗಿಲ
ಚರರು ತಡೆದರೆ ಮೆಟ್ಟಿದನು ತಿವಿದನು ಕಠಾರಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ