ಪದ್ಯ ೫೬: ಪ್ರಾತಿಕಾಮಿಕ ಮತ್ತು ದ್ರೌಪದಿಯ ನಡುವೆ ಯಾವ ಸಂಭಾಷಣೆಯಾಯಿತು?

ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ (ಸಭಾ ಪರ್ವ, ೧೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹೌದು ತಾಯೆ ರಾಜನು ಮೊದಲು ತನ್ನನ್ನು ಸೋತು ಆಮೇಲೆ ನಿಮ್ಮನ್ನು ಪಣವಾಗಿ ಜೂಜಿನಲ್ಲಿಟ್ಟು ಸೋತನು, ತಾಯೆ ನೀವು ಕೌರವನ ಆಸ್ಥಾನಕ್ಕೆ ಬೇಗನೇ ಬನ್ನಿ ಎಂದು ಪ್ರಾತಿಕಾಮಿಕನು ಹೇಳಲು, ದ್ರೌಪದಿಯು ಇದು ಮನುಷ್ಯರ ಕಾರ್ಯವಲ್ಲ, ಇದರಲ್ಲಿ ದೈವದ ಕುಹಕವಿದೆ ಎಂದು ತಿಳಿದು, ನಾನೇ ಸಭೆಗೆ ಬರುತ್ತೇನೆ ಅದಕ್ಕಿಂತ ಮುಂಚೆ ನೀನು ಹೋಗಿ ಈ ಮಾತನ್ನು ಸಭೆಗೆ ತಿಳಿಸು ಎಂದಳು.

ಅರ್ಥ:
ಅಹುದು: ಹೌದು; ಮುನ್ನ: ಮೊದಲು; ಸೋಲು: ಪರಾಭಾ; ಮಹಿಳೆ: ಹೆಣ್ಣು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಮಹಿಪ: ರಾಜ; ಬಿಜಯಂಗೈ: ದಯಮಾಡಿಸು, ಹೊರಡು; ವಿಹಿತ: ಯೋಗ್ಯ, ಔಚಿತ್ಯ; ಮಾನುಷ: ಮನುಷ್ಯ; ದೈವ: ಭಗವಂತ; ಕುಹಕ: ಮೋಸ, ವಂಚನೆ; ಮಗ: ಸುತ; ಬಹೆನು: ಬರುವೆ; ಹೋಗು: ತೆರಳು; ಹೇಳು: ತಿಳಿಸು; ಮಾತು: ವಾಣಿ; ಸಭೆ: ಓಲಗ;

ಪದವಿಂಗಡಣೆ:
ಅಹುದು +ತನ್ನನು +ಮುನ್ನ +ಸೋತನು
ಮಹಿಳೆಗ್+ಒಡ್ಡಿದೆನ್+ಎಂದು +ನಿಮ್ಮನು
ಮಹಿಪ+ ಸೋತನು+ ತಾಯೆ +ಬಿಜಯಂಗೈಯಬೇಹುದ್+ಎನೆ
ವಿಹಿತವಿದು +ಮಾನುಷವೆ +ದೈವದ
ಕುಹಕವ್+ಐಸಲೆ +ಮಗನೆ +ತಾನೇ
ಬಹೆನು+ ನೀ +ಹೋಗ್+ಒಮ್ಮೆ +ಹೇಳ್+ಈ+ ಮಾತನ್+ಆ+ ಸಭೆಗೆ

ಅಚ್ಚರಿ:
(೧) ದ್ರೌಪದಿಯ ತಿಳುವಳಿಕೆ – ವಿಹಿತವಿದು ಮಾನುಷವೆ ದೈವದ ಕುಹಕವೈಸಲೆ

ನಿಮ್ಮ ಟಿಪ್ಪಣಿ ಬರೆಯಿರಿ