ಪದ್ಯ ೫೧: ಪ್ರಾತಿಕಾಮಿಕನ ಮಾತು ಯಾವ ಸಾಗರವನ್ನು ಸೃಷ್ಟಿಸಿತು?

ಅರಳಿದಂಬುಜ ವನಕೆ ಮಂಜಿನ
ಸರಿಯು ಸುರಿವಂದದಲಿ ಸುಗ್ಗಿಯ
ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿವಂತೆ
ಚರನ ಬಿನ್ನಹಕರಸಿ ಮೊದಲಾ
ಗಿರೆ ಸಮಸ್ತ ಸಖೀಜನದ ಮುಖ
ಸರಸಿರುಹ ಬಾಡಿದವು ಮುಸುಕಿತು ಮೌನಮಯ ಜಲಧಿ (ಸಭಾ ಪರ್ವ, ೧೫ ಸಂಧಿ, ೫೧ ಪದ್ಯ)

ತಾತ್ಪರ್ಯ:
ಸೂರ್ಯನ ರಶ್ಮಿಗೆ ಅರಳಿದ ಕಮಲದ ಮೇಲೆ ಒಮ್ಮೆಲೆ ಹಿಮದ ಮಳೆಯು ಸುರಿವಂತೆ, ಸುಗ್ಗಿಯ ಸಂಭ್ರಮದ ಕಾಲದ ಬೆಳುದಿಂಗಳ ಪ್ರಕಾಶಮಯನಾದ ಚಂದ್ರನನ್ನು ಮೋಡವು ಕವಿಯುವಂತೆ, ಪ್ರಾತಿಕಾಮಿಕನ ಮಾತುಗಳು ಸಂತೋಷದಲ್ಲಿ ಮುಳುಗಿದ್ದ ಆ ಸಭೆಯನ್ನು ಆವರಿಸಿತು, ದ್ರೌಪದಿಯಾದಿಯಾಗಿ ಅವಳ ಜೊತೆಯಲ್ಲಿದ್ದ ಸಾವಿರಾರು ಸಖಿಯರು ಈ ಮಾತನ್ನು ಕೇಳಿ ದಿಗ್ಭ್ರಮೆಗೊಂಡು ಮೌನಕ್ಕೆ ಶರಣಾದರು, ಅವರ ಮುಖದ ಕಾಂತಿಯು ಬಾಡಿದವು, ಸಂತಸದ ಮಾತುಗಳು ನಿಂತವು ಮೌನದ ಸಮುದ್ರವು ಆ ಸ್ತ್ರಿಯರ ಓಲಗವನ್ನು ಆವರಿಸಿತು.

ಅರ್ಥ:
ಅರಳು: ವಿಕಸಿಸು; ಅಂಬುಜ: ಕಮಲ; ವನ: ಬನ, ಕಾಡು; ಮಂಜು: ಹಿಮ; ಸರಿ:ಮಳೆ, ವೃಷ್ಟಿ; ಸುರಿ: ವರ್ಷಿಸು, ಧಾರೆ; ಸುಗ್ಗಿ: ಬೆಳೆಯನ್ನು ಕೊಯ್ಯುವ ಕಾಲ, ಹಬ್ಬ, ಪರ್ವ; ಸಿರಿ: ಐಶ್ವರ್ಯ; ಹೊಸ: ನವೀನ; ಬೆಳುದಿಂಗಳು: ಪೂರ್ಣಿಮೆ; ಬಲು: ದೊಡ್ಡದಾದ; ಮುಗಿಲು: ಮೋಡ, ಮೇಘ; ಕವಿ: ಆವರಿಸು; ಚರ:ದೂತ; ಬಿನ್ನಹ: ಮನವಿ; ಮೊದಲು: ಮುಂಚೆ; ಸಮಸ್ತ: ಎಲ್ಲಾ; ಸಖಿ: ದಾಸಿ; ಜನ: ಗುಂಪು; ಮುಖ: ಆನನ; ಸರಸಿರುಹ: ಕಮಲ; ಬಾಡು: ಒಣಗು, ಕಳೆಗುಂದು; ಮುಸುಕು: ಆವರಿಸು; ಮೌನ: ನಿಶ್ಯಬ್ದತೆ, ನೀರವತೆ; ಜಲಧಿ: ಸಾಗರ;

ಪದವಿಂಗಡಣೆ:
ಅರಳಿದ್+ಅಂಬುಜ +ವನಕೆ +ಮಂಜಿನ
ಸರಿಯು +ಸುರಿವಂದದಲಿ +ಸುಗ್ಗಿಯ
ಸಿರಿಯ +ಹೊಸ +ಬೆಳುದಿಂಗಳನು +ಬಲುಮುಗಿಲು +ಕವಿವಂತೆ
ಚರನ +ಬಿನ್ನಹಕರಸಿ+ ಮೊದಲಾ
ಗಿರೆ+ ಸಮಸ್ತ +ಸಖೀಜನದ +ಮುಖ
ಸರಸಿರುಹ +ಬಾಡಿದವು +ಮುಸುಕಿತು+ ಮೌನಮಯ +ಜಲಧಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಂತಸವು ಬಾಡಿತು ಎಂದು ಹೇಳುವ ಪರಿ – ಅರಳಿದಂಬುಜ ವನಕೆ ಮಂಜಿನ ಸರಿಯು ಸುರಿವಂದದಲಿ; ಸುಗ್ಗಿಯ ಸಿರಿಯ ಹೊಸ ಬೆಳುದಿಂಗಳನು ಬಲುಮುಗಿಲು ಕವಿವಂತೆ
(೨) ಮೌನದ ಗಾಢತೆಯನ್ನು ವಿವರಿಸುವ ಪರಿ – ಮೌನಮಯ ಜಲಧಿ

ನಿಮ್ಮ ಟಿಪ್ಪಣಿ ಬರೆಯಿರಿ