ಪದ್ಯ ೪೪: ದುರ್ಯೋಧನನು ದ್ರೌಪದಿಯನ್ನು ಕರೆತರಲು ಯಾರನ್ನು ಕಳಿಸಿದನು?

ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ (ಸಭಾ ಪರ್ವ, ೧೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರನ ಮಾತಿಗೆ ಕಿಮ್ಮತ್ತು ಕೊಡದೆ, ವಿದುರನು ಪಾಂಡವರ ದೇಹದ ಹೊರಗಿರುವ ಜೀವದಂತೆ ವ್ಯವಹರಿಸುತ್ತಿದ್ದಾನೆ, ತಿಳಿದಿದ್ದರೂ ಬುದ್ಧಿಭ್ರಮಣೆಯಾಗಿರುವವ, ನಮ್ಮ ಗುಂಪಿನ ಹೊರಗಿನವನಾಗಿದ್ದಾನೆ, ಇವನನ್ನು ನಾನೇಕೆ ಕೆಣಕಿದೆ, ಎಲೈ ಪಾತಿಕಾಮಿಕ, ಈ ವಿದುರ ಇಲ್ಲಿರಲಿ, ನೀನು ಹೋಗಿ ದ್ರೌಪದಿಯನ್ನು ಕರೆದುಕೊಂಡು ಬಾ ಎನಲು, ಪ್ರತಿಕಾಮಿಕನು ಅಪ್ಪಣೆ ಜೀಯ ಎಂದು ಹೇಳಿ ದ್ರೌಪದಿಯ ಅರಮನೆಗೆ ತೆರಳಿದನು.

ಅರ್ಥ:
ಬಹಿರಂಗ: ಹೊರಗೆ; ಜೀವ: ಉಸಿರು; ವ್ಯವಹರಣೆ: ಉದ್ಯೋಗ; ವೃಥ: ಸುಮ್ಮನೆ; ಕೆಣಕು: ರೇಗಿಸು, ಪ್ರಚೋದಿಸು; ಬೋಧ: ಬೋಧಿಸುವಿಕೆ, ವಿಚಾರ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬಾಹಿರ: ಹೊರಗಿನವ; ಯುವತಿ: ಹೆಣ್ಣು; ಕರೆ: ಬರೆಮಾಡು: ಹೋಗು: ತೆರಳು; ಹಸಾದ: ಅಪ್ಪಣೆ; ಹಾಯ್ಕು: ತೊಡು; ಬಂದನು: ಆಗಮಿಸು; ದೇವಿ: ಸ್ತ್ರೀ, ಲಲನೆ; ಅರಮನೆ: ಆಲಯ;

ಪದವಿಂಗಡಣೆ:
ಇವನ್+ಅವರ +ಬಹಿರಂಗ+ ಜೀವ
ವ್ಯವಹರಣೆ+ ಆತನು+ ವೃಥಾ +ತಾನ್
ಇವನ +ಕೆಣಕಿದೆನ್+ಅಕಟ +ಬೋಧ+ಭ್ರಾಂತಿ +ಬಾಹಿರನ
ಇವನಿರಲಿ+ ಬಾ +ಪ್ರಾತಿಕಾಮಿಕ
ಯುವತಿಯನು +ಕರೆಹೋಗು +ನೀನ್+ಎನಲ್
ಅವ+ ಹಸಾದವ+ ಹಾಯ್ಕಿ +ಬಂದನು +ದೇವಿ+ಅರಮನೆಗೆ

ಅಚ್ಚರಿ:
(೧) ವಿದುರನನ್ನು ಬಯ್ಯುವ ಪರಿ – ಬೋಧಭ್ರಾಂತಿ ಬಾಹಿರನ
(೨) ವಿದುರನು ಪಾಂಡವರ ಪಕ್ಷಪಾತಿ ಎಂದು ಹೇಳುವ ಪರಿ – ಇವನವರ ಬಹಿರಂಗ ಜೀವ
ವ್ಯವಹರಣೆ

ನಿಮ್ಮ ಟಿಪ್ಪಣಿ ಬರೆಯಿರಿ