ಇವನವರ ಬಹಿರಂಗ ಜೀವ
ವ್ಯವಹರಣೆಯಾತನು ವೃಥಾ ತಾ
ನಿವನ ಕೆಣಕಿದೆನಕಟ ಬೋಧಭ್ರಾಂತಿ ಬಾಹಿರನ
ಇವನಿರಲಿ ಬಾ ಪ್ರಾತಿಕಾಮಿಕ
ಯುವತಿಯನು ಕರೆಹೋಗು ನೀನೆನ
ಲವ ಹಸಾದವ ಹಾಯ್ಕಿ ಬಂದನು ದೇವಿಯರಮನೆಗೆ (ಸಭಾ ಪರ್ವ, ೧೫ ಸಂಧಿ, ೪೪ ಪದ್ಯ)
ತಾತ್ಪರ್ಯ:
ದುರ್ಯೋಧನನು ವಿದುರನ ಮಾತಿಗೆ ಕಿಮ್ಮತ್ತು ಕೊಡದೆ, ವಿದುರನು ಪಾಂಡವರ ದೇಹದ ಹೊರಗಿರುವ ಜೀವದಂತೆ ವ್ಯವಹರಿಸುತ್ತಿದ್ದಾನೆ, ತಿಳಿದಿದ್ದರೂ ಬುದ್ಧಿಭ್ರಮಣೆಯಾಗಿರುವವ, ನಮ್ಮ ಗುಂಪಿನ ಹೊರಗಿನವನಾಗಿದ್ದಾನೆ, ಇವನನ್ನು ನಾನೇಕೆ ಕೆಣಕಿದೆ, ಎಲೈ ಪಾತಿಕಾಮಿಕ, ಈ ವಿದುರ ಇಲ್ಲಿರಲಿ, ನೀನು ಹೋಗಿ ದ್ರೌಪದಿಯನ್ನು ಕರೆದುಕೊಂಡು ಬಾ ಎನಲು, ಪ್ರತಿಕಾಮಿಕನು ಅಪ್ಪಣೆ ಜೀಯ ಎಂದು ಹೇಳಿ ದ್ರೌಪದಿಯ ಅರಮನೆಗೆ ತೆರಳಿದನು.
ಅರ್ಥ:
ಬಹಿರಂಗ: ಹೊರಗೆ; ಜೀವ: ಉಸಿರು; ವ್ಯವಹರಣೆ: ಉದ್ಯೋಗ; ವೃಥ: ಸುಮ್ಮನೆ; ಕೆಣಕು: ರೇಗಿಸು, ಪ್ರಚೋದಿಸು; ಬೋಧ: ಬೋಧಿಸುವಿಕೆ, ವಿಚಾರ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬಾಹಿರ: ಹೊರಗಿನವ; ಯುವತಿ: ಹೆಣ್ಣು; ಕರೆ: ಬರೆಮಾಡು: ಹೋಗು: ತೆರಳು; ಹಸಾದ: ಅಪ್ಪಣೆ; ಹಾಯ್ಕು: ತೊಡು; ಬಂದನು: ಆಗಮಿಸು; ದೇವಿ: ಸ್ತ್ರೀ, ಲಲನೆ; ಅರಮನೆ: ಆಲಯ;
ಪದವಿಂಗಡಣೆ:
ಇವನ್+ಅವರ +ಬಹಿರಂಗ+ ಜೀವ
ವ್ಯವಹರಣೆ+ ಆತನು+ ವೃಥಾ +ತಾನ್
ಇವನ +ಕೆಣಕಿದೆನ್+ಅಕಟ +ಬೋಧ+ಭ್ರಾಂತಿ +ಬಾಹಿರನ
ಇವನಿರಲಿ+ ಬಾ +ಪ್ರಾತಿಕಾಮಿಕ
ಯುವತಿಯನು +ಕರೆಹೋಗು +ನೀನ್+ಎನಲ್
ಅವ+ ಹಸಾದವ+ ಹಾಯ್ಕಿ +ಬಂದನು +ದೇವಿ+ಅರಮನೆಗೆ
ಅಚ್ಚರಿ:
(೧) ವಿದುರನನ್ನು ಬಯ್ಯುವ ಪರಿ – ಬೋಧಭ್ರಾಂತಿ ಬಾಹಿರನ
(೨) ವಿದುರನು ಪಾಂಡವರ ಪಕ್ಷಪಾತಿ ಎಂದು ಹೇಳುವ ಪರಿ – ಇವನವರ ಬಹಿರಂಗ ಜೀವ
ವ್ಯವಹರಣೆ