ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಂ ಮುನ್ನ ಶಕುನಿಗೆ
ಬೀಳುವುವು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ಕೆಡಹಿತರ್ಜುನನ (ಸಭಾ ಪರ್ವ, ೧೫ ಸಂಧಿ, ೨೧ ಪದ್ಯ)
ತಾತ್ಪರ್ಯ:
ಜನಮೇಜಯ ಇನ್ನು ಹೇಳುವುದೇನಿದೆ, ಪಗಡೆಯಾಟದಲ್ಲಿ ಧರ್ಮಜನು ಇಟ್ಟ ಕಾಯಿಯು ಮುರಿಯಿತು. ಮೋಸದಲ್ಲಿ ಪ್ರವೀಣರಾದವರ ಕೈಚಳಕವನ್ನು ಯಾರು ತಾನೇ ತಿಳಿಯಬಲ್ಲರು. ಶಕುನಿಯು ಇಂತಹ ಗರವು ತನಗೆ ಬೇಕೆಂದು ದಾಳಕ್ಕೆ ಹೇಳುವ ಮೊದಲೇ ಆ ಗರವು ಬೀಳುತ್ತಿತ್ತು. ಕ್ರೂರವಾದ ವಂಚನೆಯ ವಿಧಿ ಪಾಶವು, ಕಾಲಿಗೆ ತೊಡಕಿಕೊಂಡು ಅರ್ಜುನನನ್ನು ಕೆಡವಿತು.
ಅರ್ಥ:
ಮೇಲೆ: ಮುಂದಿನ, ನಂತರ; ಹೇಳು: ತಿಳಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸಾಲು: ಪಂಕ್ತಿ; ಮುರಿ: ಸೀಳು; ಸೆರೆ: ಬಂಧನ; ಕಳವು:ಅಪಹರಣ ; ಕಾಲುಕೀಲ್ಗಳು: ಅಡಿ, ಬುಡ, ರೀತಿ; ಬಲ್ಲರು: ತಿಳಿದವರು; ಕುಟಿಲ: ಮೋಸ; ಕೋವಿದ: ಪಂಡಿತ; ಮುನ್ನ: ಮೊದಲೇ; ಬೇಕಾದ: ಇಚ್ಛಿಸಿದ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ಕೌಳಿಕ: ಕಟುಕ, ಮೋಸ, ವಂಚನೆ; ವಿಧಿ: ಹಣೆಬರಹ, ಅದೃಷ್ಟ; ತೊಡಕು: ಸಿಕ್ಕು, ಅಡ್ಡಿ, ಗೊಂದಲ; ಕೆಡಹು: ಬೀಳಿಸು, ಸಂಹರಿಸು;
ಪದವಿಂಗಡಣೆ:
ಮೇಲೆ +ಹೇಳುವುದೇನು+ ಸಾರಿಯ
ಸಾಲು +ಮುರಿದುದು +ಸೆರೆಯ +ಕಳವಿನ
ಕಾಲು +ಕೀಲ್ಗಳನಾರು+ ಬಲ್ಲರು +ಕುಟಿಲ +ಕೋವಿದರ
ಹೇಳುವದರಿಂ +ಮುನ್ನ +ಶಕುನಿಗೆ
ಬೀಳುವುವು +ಬೇಕಾದ+ ದಾಯವು
ಕೌಳಿಕದ +ವಿಧಿಪಾಶ+ ತೊಡಕಿತು +ಕೆಡಹಿತ್+ಅರ್ಜುನನ
ಅಚ್ಚರಿ:
(೧) ಅರ್ಜುನನ ಪಣವು ಸೋತಿತೆನ್ನಲು – ಕೌಳಿಕದ ವಿಧಿಪಾಸಶ ತೊಡಕಿತು ಕೆಡಹಿತರ್ಜುನನ
(೨) ದುಷ್ಟರನ್ನು ವಿವರಿಸುವ ಪರಿ – ಕಳವಿನ ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ