ಪದ್ಯ ೧೯: ಶಕುನಿಯು ಭೀಮಾರ್ಜುನರಿಗೆ ಏನು ಹೇಳಿದ?

ಎಲೆ ಧನಂಜಯ ನಿನ್ನನೊಡ್ಡಿದ
ಛಲಿ ಯುಧಿಷ್ಠಿರನಿಲ್ಲಿ ಸೋತರೆ
ಬಳಿಕ ನಿನ್ನನೆ ಮಾರಿದನಲಾ ಕೌರವೇಂದ್ರನಿಗೆ
ತಿಳಿದು ಭೀಮಾರ್ಜುನರು ನೀವ್ ನಿ
ಮ್ಮೊಳಗೆ ಬಲಿದಿಹುದೆನಲು ಖತಿಯಲಿ
ಮುಳಿದು ಬೈದರು ಭೀಮ ಪಾರ್ಥರು ಜರಿದು ಸೌಬಲನ (ಸಭಾ ಪರ್ವ, ೧೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಧನಂಜಯನನ್ನು ಒಡ್ಡಿದ ಮೇಲೆ ಶಕುನಿಯು ಅರ್ಜುನನಿಗೆ, ಎಲೈ ಅರ್ಜುನ ನಿಮ್ಮ ಅಣ್ಣನು ನಿನ್ನನ್ನು ಪಣವಾಗಿ ಒಡ್ಡಿದ್ದಾನೆ. ಅವನು ಸೋತರೆ ನಿನ್ನನ್ನು ಕೌರವನಿಗೆ ಮಾರಿದ ಹಾಗೆ, ಇದನ್ನು ತಿಳಿದು ನೀವು ಭೀಮಾರ್ಜುನರು ಜೀವವನ್ನು ಗಟ್ಟಿಮಾಡಿಕೊಳ್ಳಿ ಎನ್ನಲು, ಅವರಿಬ್ಬರು ಶಕುನಿಯನ್ನು ಬೈದರು.

ಅರ್ಥ:
ಒಡ್ಡು: ನೀಡು,ಜೂಜಿನಲ್ಲಿ ಒಡ್ಡುವ ಹಣ; ಛಲಿ: ಹಟವುಳ್ಳವನು; ಸೋಲು: ಪರಾಭವ; ಬಳಿಕ: ನಂತರ; ಮಾರು: ಹರಾಜು; ತಿಳಿ: ಅರಿ; ಬಲಿ: ಗಟ್ಟಿ; ಖತಿ: ಕೋಪ; ಮುಳಿ: ಸಿಟ್ಟು, ಕೋಪ; ಬೈದರು: ಜರಿದರು; ಜರಿ:ನಿಂದಿಸು; ಸೌಬಲ: ಶಕುನಿ;

ಪದವಿಂಗಡಣೆ:
ಎಲೆ +ಧನಂಜಯ+ ನಿನ್ನನ್+ಒಡ್ಡಿದ
ಛಲಿ+ ಯುಧಿಷ್ಠಿರನ್+ಇಲ್ಲಿ +ಸೋತರೆ
ಬಳಿಕ+ ನಿನ್ನನೆ+ ಮಾರಿದನಲಾ+ ಕೌರವೇಂದ್ರನಿಗೆ
ತಿಳಿದು +ಭೀಮಾರ್ಜುನರು +ನೀವ್ +ನಿ
ಮ್ಮೊಳಗೆ+ ಬಲಿದಿಹುದ್+ಎನಲು +ಖತಿಯಲಿ
ಮುಳಿದು +ಬೈದರು +ಭೀಮ +ಪಾರ್ಥರು +ಜರಿದು +ಸೌಬಲನ

ಅಚ್ಚರಿ:
(೧) ಧನಂಜಯ, ಪಾರ್ಥ, ಅರ್ಜುನ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ