ಹರಿಬದಲಿ ತನ್ನಖಿಳ ವಸ್ತೂ
ತ್ಕರವ ಮರಳಿಚುವನು ಮಹೀಪತಿ
ಕಿರಿಯ ತಮ್ಮನವೊಡ್ಡಿದನು ಮಾದ್ರೀ ಕುಮಾರಕನ
ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋ
ತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ (ಸಭಾ ಪರ್ವ, ೧೫ ಸಂಧಿ, ೧೬ ಪದ್ಯ)
ತಾತ್ಪರ್ಯ:
ಸಹದೇವನನ್ನು ಸೋತ ಮೇಲೆ ಶಕುನಿಯು ದಾಳಗಳನ್ನು ಹೊಸೆದು, ಈ ಹಲಗೆಯಲ್ಲಿ ಯುಧಿಷ್ಠಿರನು ಸೋತ ಎಲ್ಲವನ್ನೂ ಗೆಲ್ಲಲು ಕಿರಿಯ ತಮ್ಮನನ್ನು ಒಡ್ಡಿದ್ದಾನೆ, ನನ್ನ ರಾಜಾ, ಗರವೆ ಬಾ, ಜಯಲಕ್ಷ್ಮಿಯೇ ಬಾ, ಕೌರವನ ಉನ್ನತಿಯ ಸಿದ್ಧಿಯೇ ಬಾ ಎಂದು ಶಕುನಿಯು ಗರ್ಜಿಸಿದನು.
ಅರ್ಥ:
ಹರಿಬ: ಕೆಲಸ, ಕಾರ್ಯ, ಯುದ್ಧ; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ಉತ್ಕರ: ಸಮೂಹ; ಮರಳಿ: ಮತ್ತೆ, ಪುನಃ; ಮಹೀಪತಿ: ರಾಜ; ಕಿರಿಯ: ಚಿಕ್ಕ; ತಮ್ಮ: ಸಹೋದರ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಕುಮಾರ: ಪುತ್ರ; ಅರಸ: ರಾಜ; ದಾಯ: ಪಗಡೆಯ ಗರ; ಜಯ: ಗೆಲುವು; ಜಯಾಂಗದಸಿರಿ: ಜಯಲಕ್ಷ್ಮಿ; ಉತ್ಕರ: ಉನ್ನತಿ; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಬಾ: ಆಗಮಿಸು; ಗರ್ಜಿಸು: ಜೋರಾಗಿ ಕೂಗು;
ಪದವಿಂಗಡಣೆ:
ಹರಿಬದಲಿ+ ತನ್+ಅಖಿಳ +ವಸ್ತು
ಉತ್ಕರವ +ಮರಳಿಚುವನು+ ಮಹೀಪತಿ
ಕಿರಿಯ +ತಮ್ಮನವ್+ಒಡ್ಡಿದನು +ಮಾದ್ರೀ +ಕುಮಾರಕನ
ಅರಸು +ದಾಯವೆ +ಬಾ +ಜಯಾಂಗದ
ಸಿರಿಯೆ +ಬಾ +ಕುರುರಾಯ +ರಾಜ
ಉತ್ಕರದ+ ಸಿದ್ಧಿಯೆ+ ಬಾ+ಎನುತ +ಗರ್ಜಿಸಿದನಾ +ಶಕುನಿ
ಅಚ್ಚರಿ:
(೧) ಶಕುನಿಯು ದಾಳವನ್ನು ಹಾಕುವ ಪರಿ – ಅರಸು ದಾಯವೆ ಬಾ ಜಯಾಂಗದ
ಸಿರಿಯೆ ಬಾ ಕುರುರಾಯ ರಾಜೋತ್ಕರದ ಸಿದ್ಧಿಯೆ ಬಾಯೆನುತ ಗರ್ಜಿಸಿದನಾ ಶಕುನಿ