ಪದ್ಯ ೧೫: ಧರ್ಮಜನು ಯಾರನ್ನು ಒಡ್ಡಿ ಸೋತುದನ್ನು ಪಡೆಯುತ್ತೇನೆಂದನು?

ಅರಸ ಸೋತೈ ನಕುಲನನು ಹೇ
ವರಿಸದಿರು ಹೇಳೊಡ್ಡವನು ವಿ
ಸ್ತರಿಸಲೊಂದೇ ಹಲಗೆ ಸೋಲ್ವುದು ಹೇಳು ಹೇಳೆನಲು
ವರಿಸಿದೆನು ಸಹದೇವನನು ನೆರೆ
ಮರಳಿಚುವೆನೆನ್ನಖಿಳ ವಸ್ತೂ
ತ್ಕರವನೆಂದನು ಧರ್ಮನಂದನನರಸ ಕೇಳೆಂದ (ಸಭಾ ಪರ್ವ, ೧೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ರಾಜ ನೀನು ನಕುಲನನ್ನು ಸೋತೆ, ಅಸಹ್ಯಪಟ್ಟುಕೊಳ್ಳದೆ ಮತ್ತೇನನ್ನು ಪಣಕ್ಕೆ ಹೂಡುವೆ? ಹಲಗೆ ಗೆಲ್ಲುತ್ತದೆ ಅಥವ ಸೋಲುತ್ತದೆ, ಶಕುನಿಯ ಮಾತನ್ನು ಕೇಳಿದ ಯುಧಿಷ್ಠಿರನು ನೀವು ನನ್ನಿಂದ ಗೆದ್ದಿರುವ ಎಲ್ಲವನ್ನು ನೀವೊಡ್ಡಿರಿ, ಅದಕ್ಕೆ ಪ್ರತಿಯಾಗಿ ನಾನು ಸಹದೇವನನ್ನು ಒಡ್ಡಿ ಸೋತಿರುವುದೆಲ್ಲವನ್ನೂ ಮರಳಿ ಪಡೆಯುತ್ತೇನೆ ಎಂದು ಯುಧಿಷ್ಠಿರನು ನುಡಿದನು.

ಅರ್ಥ:
ಅರಸ: ರಾಜ; ಸೋತು: ಸೋಲು, ಪರಾಭವ; ಹೇವರಿಸು: ಹೇಸಿಗೆಪಟ್ಟುಕೋ; ಹೇಳು: ತಿಳಿಸು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ವಿಸ್ತರಿಸು: ಹರಡು; ಹಲಗೆ: ಪಗಡೆಯ ಹಾಸು; ಸೋಲು: ಪರಾಭವ; ವರಿಸು: ಆರಿಸು, ಆಯ್ಕೆ; ನೆರೆ: ಸೇರು, ಜೊತೆಗೂಡು; ಮರಳಿ: ಮತ್ತೆ, ಪುನಃ; ಅಖಿಳ: ಎಲ್ಲಾ; ವಸ್ತು: ಸಾಮಗ್ರಿ; ಉತ್ಕರ: ಸಮೂಹ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ +ಸೋತೈ +ನಕುಲನನು+ ಹೇ
ವರಿಸದಿರು +ಹೇಳ್+ಒಡ್ಡವನು +ವಿ
ಸ್ತರಿಸಲ್+ಒಂದೇ +ಹಲಗೆ +ಸೋಲ್ವುದು +ಹೇಳು +ಹೇಳೆನಲು
ವರಿಸಿದೆನು +ಸಹದೇವನನು +ನೆರೆ
ಮರಳಿಚುವೆನ್+ಎನ್+ಅಖಿಳ+ ವಸು
ಉತ್ಕರವನ್+ಎಂದನು +ಧರ್ಮನಂದನನ್+ಅರಸ+ ಕೇಳೆಂದ

ಅಚ್ಚರಿ:
(೧) ಹ ಕಾರದ ಜೋಡಿ ಪದಗಳು – ಹೇವರಿಸದಿರು ಹೇಳೊಡ್ಡವನು; ಹೇಳು ಹೇಳೆನಲು

ನಿಮ್ಮ ಟಿಪ್ಪಣಿ ಬರೆಯಿರಿ