ಪದ್ಯ ೧೨: ಧರ್ಮಜನು ಯಾರನ್ನು ಪಣಕ್ಕಿಟ್ಟನು?

ಖಿನ್ನನಾದನು ರಾಜ್ಯಲಕ್ಷ್ಮಿಯ
ಬೆನ್ನ ಕಂಡನು ಕಳಚಿ ಹೋದ ನಿ
ಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ
ಇನ್ನು ಪಣವೇನೋ ವಿರೋಧಿಗ
ಳೆನ್ನ ಭಂಗಿಸಿ ನುಡಿದರಿದಕಿ
ನ್ನೆನ್ನನಿಕ್ಕಿಯೆ ದ್ಯೂತವಿಜಯವ ಸಾಧಿಸುವೆನೆಂದ (ಸಭಾ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ದುಃಖಭರಿತನಾದನು. ಅವನು ತನ್ನ ರಾಜ್ಯಲಕ್ಷ್ಮಿಯು ಬೆನ್ನನ್ನು ನೋಡಿ, ಆಕೆ ತನ್ನಿಂದ ದೂರ ಹೋಗುತ್ತಿರುವುದನ್ನು ಕಂಡನು. ಅವನ ಉನ್ನತಿಯು ಕಳಚಿಹೋಯಿತು. ವೈಭವವು ಇಲ್ಲವಾಗಲು ಅವನು ಏನು ತಾನೆ ಮಾಡಿಯಾನು? ಆದರೂ ಅವನು ನನ್ನ ವಿರೋಧಿಗಳು ನನ್ನನ್ನು ಕಡೆಗಣಿಸಿ ಅವಹೇಳನೆಯ ಮಾತನ್ನಾಡಿದನು. ಇನ್ನು ನನ್ನನ್ನೇ ಪಣವಾಗಿಟ್ಟು ಜೂಜನ್ನು ಗೆಲ್ಲುತ್ತೇನೆ ಎಂದು ನಿಶ್ಚಯಿಸಿದನು.

ಅರ್ಥ:
ಖಿನ್ನ: ಖೇದ, ವಿಷಾದ, ನೊಂದ; ರಾಜ್ಯ: ರಾಷ್ಟ್ರ; ಲಕ್ಷ್ಮಿ: ಐಶ್ವರ್ಯ; ಬೆನ್ನ: ಹಿಂಭಾಗ; ಕಂಡು: ನೋಡು; ಕಳಚು: ಬೇರ್ಪಡಿಸು, ಬೇರೆಮಾಡು; ಹೋದ: ತೆರಳು; ನಿಜ: ದಿಟ; ಉನ್ನತಿ: ಹೆಚ್ಚಳ; ಅವನೀಶ್ವರ: ರಾಜ; ಮುರಿ: ಸೀಳು; ಮಹಿಮೆ: ಷ್ಠತೆ, ಔನ್ನತ್ಯ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ವಿರೋಧಿ: ಶತ್ರು, ವೈರಿ; ಭಂಗಿಸು: ನಾಶಮಾಡು, ಸೋಲಿಸು; ನುಡಿ: ಮಾತಾಡು; ಇಕ್ಕಿ: ಇಡು; ದ್ಯೂತ: ಜೂಜು; ವಿಜಯ: ಗೆಲುವು; ಸಾಧಿಸು: ಪಡೆ, ದೊರ ಕಿಸಿಕೊಳ್ಳು;

ಪದವಿಂಗಡಣೆ:
ಖಿನ್ನನಾದನು +ರಾಜ್ಯಲಕ್ಷ್ಮಿಯ
ಬೆನ್ನ +ಕಂಡನು +ಕಳಚಿ +ಹೋದ +ನಿಜ
ಉನ್ನತಿಯಲ್+ಅವನೀಶನಿದ್ದನು +ಮುರಿದ +ಮಹಿಮೆಯಲಿ
ಇನ್ನು+ ಪಣವೇನೋ+ ವಿರೋಧಿಗಳ್
ಎನ್ನ +ಭಂಗಿಸಿ +ನುಡಿದರ್+ಇದಕಿನ್
ಎನ್ನನ್+ಇಕ್ಕಿಯೆ +ದ್ಯೂತ+ವಿಜಯವ +ಸಾಧಿಸುವೆನೆಂದ

ಅಚ್ಚರಿ:
(೧) ಸೋಲುತ್ತಿರುವುದನ್ನು ವಿವರಿಸುವ ಪರಿ – ರಾಜ್ಯಲಕ್ಷ್ಮಿಯ ಬೆನ್ನ ಕಂಡನು
(೨) ಧರ್ಮರಾಯನ ನೋವು – ಹೋದ ನಿಜೋನ್ನತಿಯಲವನೀಶನಿದ್ದನು ಮುರಿದ ಮಹಿಮೆಯಲಿ

ನಿಮ್ಮ ಟಿಪ್ಪಣಿ ಬರೆಯಿರಿ