ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ (ಸಭಾ ಪರ್ವ, ೧೪ ಸಂಧಿ, ೭೩ ಪದ್ಯ)
ತಾತ್ಪರ್ಯ:
ದುರ್ಯೋಧನನು ವಿದುರ ಮಾತಿಗೆ ಉತ್ತರಿಸುತ್ತಾ, ವಿದುರಾ ನೀನು ದುಷ್ಟನೇ ಸರಿ, ನಿನ್ನ ಬುದ್ಧಿಗೆ ಸಮಸ್ತ ವಿದ್ಯೆ ಕಲೆಗಳು ತಿಳಿದಿವೆ, ನೀನು ವಿಶಾಲಮತಿಯೆಂದು ಕರೆಯೋಣವೆಂದರೆ ಈ ಜಗತ್ತಿನ ಎಲ್ಲಾ ದಡ್ಡರಿಗೂ ನೀನೇ ಅಧಿದೇವತೆ. ಇದು ಹಿತವೋ ಅಹಿತವೋ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ಪಾಂಡಿತ್ಯ, ಆದರೆ ನಿನ್ನನ್ನು ಇಲ್ಲಿ ಯಾರಾದರೂ ಕೇಳಿರುವವರೇ ಎಂದು ವಿದುರನನ್ನು ಜರೆದನು.
ಅರ್ಥ:
ಖೂಳ: ದುಷ್ಟ; ಸಕಲ: ಎಲ್ಲಾ; ಕಲೆ: ವಿದ್ಯೆ; ಬಾಳುಮನೆ: ತೌರುಮನೆ, ವಾಸಸ್ಥಾನ; ಗಡ: ಅಲ್ಲವೆ; ಬುದ್ಧಿ: ತಿಳಿವು, ಅರಿವು; ವಿಶಾಲ: ವಿಸ್ತಾರ; ಮತಿ: ಬುದ್ಧಿ; ಅಜ್ಞರು: ಅಜ್ಞಾನಿ, ದಡ್ಡ; ಅಧಿದೈವ: ಮುಖ್ಯವಾದ ದೇವರು; ಕೇಳು: ವಿಚಾರಿಸು; ಮೇಣ್: ಅಥವ, ಇಲ್ಲವೇ; ಹಿತ: ಒಳಿತು; ಹೇಳು: ತಿಳಿಸು; ಪಾಂಡಿತ್ಯ: ವಿದ್ವತ್ತು; ರಾಯ: ಒಡೆಯ;
ಪದವಿಂಗಡಣೆ:
ಖೂಳನೆಂಬೆನೆ +ಸಕಲ +ಕಲೆಗಳ
ಬಾಳುಮನೆ +ಗಡ +ನಿನ್ನ +ಬುದ್ಧಿ +ವಿ
ಶಾಲಮತಿ +ನೀನೆಂಬೆನೇ +ಜಗದ್+ಅಜ್ಞರ್+ಅಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ
ಅಚ್ಚರಿ:
(೧) ಖೂಳನೆಂಬೆನೆ, ನೀನೆಂಬೆನೆ – ಪ್ರಾಸ ಪದ
(೨) ವಿದುರನನ್ನು ಬಯ್ಯುವ ಪರಿ – ಜಗದಜ್ಞರಧಿದೈವ
(೩) ಪಂಡಿತರ ಬಗ್ಗೆ ಹೇಳುವ ಪರಿ – ಕೇಳಿದೊಡೆ ಮೇಣಹಿತ ಹಿತವನು ಹೇಳುವುದು ಪಾಂಡಿತ್ಯ