ಪದ್ಯ ೫೬: ಧರ್ಮರಾಯನು ಪಣದಲ್ಲಿ ಏನನ್ನು ಸೋತನು?

ಏನನಾಡಿದಡೇನು ಫಲ ದೈ
ವಾನುರಾಗದ ಕುಣಿಕೆ ಬೇರಹು
ದಾ ನರೇಂದ್ರನ ಸಾರಿ ಸೋತದು ನಿಮಿಷಮಾತ್ರದಲಿ
ಆ ನಿರೂಢಿಯ ಹತ್ತು ಸಾವಿರ
ಮಾನಿನಿಯರನು ಮತ್ತೆ ಸೋತನು
ಮಾನನಿಧಿಯೇ ಮತ್ತೆ ಪಣವೇನೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೬ ಪದ್ಯ)

ತಾತ್ಪರ್ಯ:
ಏನು ಹೇಳಿದರೇನು ಪ್ರಯೋಜನ, ದೈವದ ಒಲವೇ ಬೇರೆಯಾಗಿತ್ತು, ಧರ್ಮರಾಯನ ಕಾಯಿಗಳು ನಿಮಿಷದಲ್ಲಿ ಸೋತುಹೋದವು. ಮತ್ತೆ ಹತ್ತು ಸಾವಿರ ಸ್ತ್ರೀಯರನ್ನು ಒಡ್ಡಿ ಸೋತನು. ಶಕುನಿಯು ಹೇ ಸ್ವಾಭಿಮಾನನಿಧಿಯೇ ಮತ್ತೇನು ಪಣೆ ಎಂದು ಕೇಳಿದನು.

ಅರ್ಥ:
ಆಡು: ಮಾತಾಡು; ಫಲ: ಪ್ರಯೋಜನ; ದೈವಾನುರಾಗ: ಭಗವಂತನ ಕೃಪೆ; ಕುಣಿಕೆ: ಕೊನೆ, ತುದಿ; ಬೇರಹುದು: ಬೇರೆ, ಅನ್ಯ; ನರೇಂದ್ರ: ರಾಜ; ಸಾರಿ: ಬಾರಿ, ಸರರ್ತಿ; ಸೋತು: ಸೋಲು, ಪರಾಭವ; ನಿಮಿಷ: ಕ್ಷಣ; ನಿರೂಢಿ: ಸಾಮಾನ್ಯ; ಹತ್ತು: ದಶ; ಸಾವಿರ: ಸಹಸ್ರ; ಮಾನಿನಿ: ಹೆಣ್ಣು; ಮಾನನಿಧಿ: ಮಾನವನ್ನೇ ನಿಧಿಯಾಗಿಟ್ಟುಕೊಂಡಿರುವ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ;

ಪದವಿಂಗಡಣೆ:
ಏನನಾಡಿದಡ್+ಏನು +ಫಲ +ದೈ
ವಾನುರಾಗದ +ಕುಣಿಕೆ +ಬೇರಹುದ್
ಆ+ ನರೇಂದ್ರನ +ಸಾರಿ +ಸೋತದು +ನಿಮಿಷಮಾತ್ರದಲಿ
ಆ +ನಿರೂಢಿಯ +ಹತ್ತು +ಸಾವಿರ
ಮಾನಿನಿಯರನು+ ಮತ್ತೆ +ಸೋತನು
ಮಾನನಿಧಿಯೇ +ಮತ್ತೆ +ಪಣವ್+ಏನೆಂದನಾ +ಶಕುನಿ

ಅಚ್ಚರಿ:
(೧) ಧರ್ಮರಾಯನನ್ನು ಶಕುನಿ ಕರೆದ ಬಗೆ – ಮಾನನಿಧಿಯೇ
(೨) ಮಾನಿನಿ, ಮಾನನಿಧಿ – ಪದಗಳ ಬಳಕೆ
(೩) ದೈವದ ಅನುಗ್ರಹ ಮುಖ್ಯವೆಂದು ಹೇಳುವ ಸಾಲು – ದೈವಾನುರಾಗದ ಕುಣಿಕೆ ಬೇರಹುದು

ನಿಮ್ಮ ಟಿಪ್ಪಣಿ ಬರೆಯಿರಿ