ಪದ್ಯ ೫೫: ಧರ್ಮರಾಯನು ಯಾರನ್ನು ಪಣಕ್ಕೆ ಹೂಡಲು ಯೋಚಿಸಿದ?

ಫಡ ದರಿದ್ರನೆ ತಾನು ತನ್ನೆಯ
ಮಡದಿಯರ ಕೆಳದಿಯರು ಸಾವಿರ
ಮಡಿ ಸುಯೋಧನ ರಾಜಭವನದ ವಾರನಾರಿಯರ
ನುಡಿಯಬೇಕೇ ಧರ್ಮಸುತ ನಿ
ಮ್ಮಡಿಗಳೊಡ್ಡಿದ ಬಳಿಕ ಗೆಲಿದವ
ರೊಡವೆಯೈಸಲೆ ಹಾಯ್ಕು ಹಾಯ್ಕೆಂದೊದರಿದನು ಶಕುನಿ (ಸಭಾ ಪರ್ವ, ೧೪ ಸಂಧಿ, ೫೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಶಕುನಿಯ ಹಂಗಿಸುವ ಮಾತಿಗೆ ಪ್ರತಿಕ್ರಯಿಸುತ್ತಾ, ನಾನು ದರಿದ್ರನೇ, ನನ್ನ ರಾಣಿಯರ ಸಖಿಯರು, ದುರ್ಯೋಧನನ ಅಂತಃಪುರದ ವಾರನಾರಿಯರು ಸಾವಿರದಷ್ಟಿದ್ದಾರೆ ಎಂದನು, ಇದಕ್ಕೆ ಶಕುನಿಯು, ಅಲ್ಲವೇ ನಿಮ್ಮಪಾದ, ಪಣವನ್ನೊಡ್ಡಿದ ಮೇಲೆ ಅವರು ಗೆದ್ದವರ ಆಸ್ತಿಯಾಗುತ್ತಾರೆ, ದಾಳವನ್ನು ಹಾಕು ಎಂದು ಕೂಗಿದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದರಿದ್ರ: ಹೀನವಾದ, ಕೆಟ್ಟ; ಮಡದಿ: ಹೆಂಡತಿ; ಕೆಳದಿ: ಗೆಳತಿ, ಸ್ನೇಹಿತೆ; ಸಾವಿರ: ಸಹಸ್ರ; ಮಡಿ: ಪಟ್ಟು; ರಾಜಭವನ: ಅರಮನೆ; ವಾರನಾರಿ: ವೇಶ್ಯೆ; ನಾರಿ: ಹೆಣ್ಣು; ನುಡಿ: ಮಾತು; ನಿಮ್ಮಡಿ: ನಿಮ್ಮ ಪಾದ; ಒಡ್ಡು: ಪಣಕ್ಕೆ ಹಾಕು; ಬಳಿಕ: ನಂತರ; ಗೆಲಿ: ಗೆಲುವು, ಜಯ; ಒಡವೆ: ಆಭರಣ; ಐಸಲೆ: ಅಲ್ಲವೇ; ಹಾಯ್ಕು: ಹೂಡು; ಒದರು: ಹೇಳು;

ಪದವಿಂಗಡಣೆ:
ಫಡ +ದರಿದ್ರನೆ +ತಾನು +ತನ್ನೆಯ
ಮಡದಿಯರ+ ಕೆಳದಿಯರು +ಸಾವಿರ
ಮಡಿ +ಸುಯೋಧನ+ ರಾಜಭವನದ+ ವಾರನಾರಿಯರ
ನುಡಿಯಬೇಕೇ+ ಧರ್ಮಸುತ +ನಿ
ಮ್ಮಡಿಗಳ್+ಒಡ್ಡಿದ +ಬಳಿಕ +ಗೆಲಿದವರ್
ಒಡವೆ+ಐಸಲೆ +ಹಾಯ್ಕು +ಹಾಯ್ಕೆಂದ್+ಒದರಿದನು +ಶಕುನಿ

ಅಚ್ಚರಿ:
(೧) ನುಡಿ, ನಿಮ್ಮಡಿ – ಪ್ರಾಸ ಪದ
(೨) ಗೆದ್ದವರ ಸ್ವತ್ತು ಎಂದು ಹೇಳಲು – ಗೆಲಿದವರೊಡವೆ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ