ಪದ್ಯ ೫೪: ಶಕುನಿ ಯುಧಿಷ್ಠಿರನನ್ನು ಏನು ಕೇಳಿದ?

ಆದವೆಮಗಿವುಗಜಘಟೆಗಳೆಂ
ದಾದುರಾತ್ಮಕನಾಡಿದನು ದು
ರ್ಭೇದವಿವದಿರ ಕಪಟಮಂತ್ರವನಾವನರಿವವನು
ಆದುದರಸಗೆ ಸೋಲವಿನ್ನೇ
ನಾದುದೈ ಭೂಪತಿಯೆ ಗಜಘಟೆ
ತೀದವೇ ಮೇಲೇಣು ಪಣವುಂಟೆಂದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಕುನಿಯ ದಾಳದ ಪ್ರಭಾವ ಆನೆಗಳ ಗುಂಪನ್ನು ಧರ್ಮರಾಯ ಸೋತನು. ಇವು ನಮಗಾದವು ಯುಧಿಷ್ಠಿರ ಎಂದು ದುಷ್ಟ ಶಕುನಿ ನುಡಿದನು, ಅವರ ಕಪಟ ಮಂತ್ರವನ್ನು ಭೇದಿಸುವುದು ಕಷ್ಟ. ಅದನ್ನ್ ತಿಳಿಯಬಲ್ಲವರಾರು? ಧರ್ಮರಾಯನು ಸೋತನು, ರಾಜ ಆನೆಗಳ ನಂತರ ಪಣಕ್ಕೆ ಮತ್ತೇನನ್ನು ಇಡುವೆ ಎಂದು ಶಕುನಿ ಕೇಳಿದನು.

ಅರ್ಥ:
ಆದವ್: ಆಯಿತು; ಎಮಗ್: ನಮಗೆ; ಗಜಘಟೆ: ಆನೆಗಳು ಗುಂಪು; ದುರಾತ್ಮ: ದುಷ್ಟ; ಆಡು: ಮಾತಾಡು; ಭೇದ: ಒಡೆ, ಬಿರುಕು; ಇವದಿರ: ಇವರ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಅರಿ: ತಿಳಿ; ಅರಸ: ರಾಜ; ಸೋಲು: ಪರಾಭವ; ಭೂಪತಿ: ರಾಜ; ಮೇಲೇನು: ಮುಂದೇನು; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ತೀದು: ಮುಗಿಸಿ;

ಪದವಿಂಗಡಣೆ:
ಆದವ್+ಎಮಗ್+ಇವು+ಗಜಘಟೆಗಳೆಂದ್
ಆ+ದುರಾತ್ಮಕನ್+ಆಡಿದನು+ ದು
ರ್ಭೇದವ್+ಇವದಿರ +ಕಪಟ+ಮಂತ್ರವನ್+ಆವನ್+ಅರಿವವನು
ಆದುದ್+ಅರಸಗೆ +ಸೋಲ್+ಅವಿನ್ನೇ
ನಾದುದೈ +ಭೂಪತಿಯೆ +ಗಜಘಟೆ
ತೀದವೇ +ಮೇಲ್+ಏಣು+ ಪಣ+ವುಂಟೆಂದನಾ+ ಶಕುನಿ

ಅಚ್ಚರಿ:
(೧) ಶಕುನಿಯ ಕಪಟ ಆಟವನ್ನು ಸೂಚಿಸುವ ಪರಿ – ದುರ್ಭೇದವಿವದಿರ ಕಪಟಮಂತ್ರವನಾವನರಿವವನು
(೨) ದುರ್ಭೇದ, ದುರಾತ್ಮ – ಶಕುನಿಗೆ ಬಳಸಿದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ