ಪದ್ಯ ೫೩: ಧರ್ಮರಾಯನು ಪಣಕ್ಕೆ ಏನನ್ನು ಒಡ್ಡಿದನು?

ಸೋತೆಯರಸಾ ನಿನಗೆ ಜೂಜಿನ
ಭೀತಿಯುಂಟೇ ಮಾಣು ಮೇಣ್ನಿ
ರ್ಭೀತನೇ ನುಡಿ ಮೇಲಣೊಡ್ಡವ ಹಲವು ಮಾತೇನು
ಕಾತರಿಸ ಬೇಡೆನಲು ಫಡ ಪಣ
ಭೀತನೇ ತಾನಕಟೆನುತ ಕುಂ
ತೀತನುಜ ನೊಡ್ಡಿದನು ಸಾವಿರ ಮತ್ತಗಜಘಟೆಯ (ಸಭಾ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಶಕುನಿಯು ಆಟದ ಆರ್ಭಟವನ್ನು ಹೆಚಿಸುತ್ತಾ, ಧರ್ಮರಾಯ ನೀನು ಸೋತೆ, ಜೂಜಾಡಲು ಹೆದರಿದರೆ ಬೇಡ, ಬಿಟ್ಟುಬಿಡು. ಭಯವಿಲ್ಲದಿದ್ದರೆ ಮುಂದಿನ ಪಣವನ್ನೊಡ್ಡು. ಹೆಚ್ಚೇನು ಹೆದರಬೇಡ ಎಂದು ಶಕುನಿಯು ಹೇಳಲು ಧರ್ಮರಾಯನು ನಾನು ಪಣವೊಡ್ಡಲು ಹೆದರುವವನೇ ಎನ್ನುತ್ತಾ ಒಂದು ಸಾವಿರ ಮದಗಜಗಳನ್ನು ಒಡ್ಡಿದನು.

ಅರ್ಥ:
ಸೋಲು: ಪರಾಭವ; ಅರಸ: ರಾಜ; ಜೂಜು: ದ್ಯೂತ; ಭೀತಿ: ಭಯ; ಮಾಣು: ಸ್ಥಗಿತಗೊಳ್ಳು, ಸುಮ್ಮನಿರು; ಮೇಣ್: ಅಥವಾ, ಇಲ್ಲವೆ; ನಿರ್ಭೀತ: ಧೈರ್ಯಶಾಲಿ; ನುಡಿ: ಮಾತು; ಮೇಲಣ: ಹೆಚ್ಚು, ಮುಂದೆ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಕಾತರ: ಕಳವಳ, ಉತ್ಸುಕತೆ; ಬೇಡ: ಸಲ್ಲದು, ಕೂಡದು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಭೀತ: ಹೆದರಿಕೆ; ತಾನ್: ನಾನು; ಅಕಟ: ಅಯ್ಯೋ; ತನುಜ: ಮಗ; ನೋಡು: ವೀಕ್ಷಿಸು; ಸಾವಿರ: ಸಹಸ್ರ; ಮತ್ತ: ಸೊಕ್ಕಿದ, ಉನ್ಮತ್ತ; ಗಜ: ಆನೆ; ಘಟೆ: ಆನೆಗಳ ಗುಂಪು;

ಪದವಿಂಗಡಣೆ:
ಸೋತೆ+ಅರಸಾ+ ನಿನಗೆ +ಜೂಜಿನ
ಭೀತಿಯುಂಟೇ+ ಮಾಣು +ಮೇಣ್
ನಿರ್ಭೀತನೇ +ನುಡಿ +ಮೇಲಣ+ಒಡ್ಡವ+ ಹಲವು +ಮಾತೇನು
ಕಾತರಿಸ+ ಬೇಡ್+ಎನಲು +ಫಡ +ಪಣ
ಭೀತನೇ +ತಾನ್+ಅಕಟೆನುತ +ಕುಂ
ತೀತನುಜ+ ನೊಡ್ಡಿದನು +ಸಾವಿರ +ಮತ್ತಗಜಘಟೆಯ

ಅಚ್ಚರಿ:
(೧) ಭೀತಿ, ನಿರ್ಭೀತಿ – ವಿರುದ್ಧ ಪದಗಳು
(೨) ಯುಧಿಷ್ಠಿರನನ್ನು ಹಂಗಿಸುವ ಪರಿ – ಸೋತೆಯರಸಾ ನಿನಗೆ ಜೂಜಿನ ಭೀತಿಯುಂಟೇ

ನಿಮ್ಮ ಟಿಪ್ಪಣಿ ಬರೆಯಿರಿ