ಪದ್ಯ ೪೮: ಧರ್ಮರಾಯನು ದುರ್ಯೋಧನನಿಗೆ ಏನು ಹೇಳಿದ?

ಎನ್ನ ಲೆಕ್ಕಕೆ ಶಕುನಿ ಭೂಪತಿ
ನಿನ್ನೊಡನೆ ಕೈಹೊದ್ಯನೊಡ್ಡವ
ನೆನ್ನೊಡನೆ ಹೇಳೆಂದು ನುಡಿದನು ಕೌರವರರಾಯ
ನಿನ್ನೊಳಾಗಲಿ ನಿನ್ನ ಮಾವನೆ
ಮುನ್ನಬರಲಿದಕೇನೆನುತೆ ಸಂ
ಪನ್ನ ಶಠರೊಡನಳವಿಗೊಟ್ಟವನೀಶನಿಂತೆಂದ (ಸಭಾ ಪರ್ವ, ೧೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ನನ್ನ ಪರವಾಗಿ ಗಂಧಾರದ ದೊರೆ ಶಕುನಿಯು ನಿನ್ನೊಡನೆ ಕಣಕ್ಕಿಳಿದಿದ್ದಾನೆ. ಪಣವನ್ನು ನನಗೇ ಹೇಳು, ಎಂದು ದುರ್ಯೋಧನನು ಹೇಳಲು, ಯುಧಿಷ್ಠಿರನು, ನೀನಾದರೂ ಬಾ, ಇಲ್ಲವೇ ನಿನ್ನ ಮಾವನೇ ಬರಲಿ ಅದರಿಂದೇನಾಯಿತು ಎಂದು ಧೂರ್ತರಾದ ಶಕುನಿ, ದುರ್ಯೋಧನನನ್ನು ಪಣಕ್ಕೆ ಆಹ್ವಾನಿಸಿದನು.

ಅರ್ಥ:
ಲೆಕ್ಕ: ಎಣಿಕೆ; ಭೂಪತಿ: ರಾಜ; ಕೈಹೊಯ್ದ: ಸೆಣಸು, ಆಡು; ಕೈ: ಹಸ್ತ; ಹೊಯ್ದು: ಹೊಡೆದು; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಹೇಳು: ತಿಳಿಸು; ನುಡಿ: ಮಾತು; ರಾಯ: ದೊರೆ; ಮಾವ: ತಾಯಿಯ ಸಹೋದರ; ಮುನ್ನ: ಮುಂದೆ; ಬರಲಿ: ಆಗಮಿಸು; ಸಂಪನ್ನ: ಸಮೃದ್ಧವಾದ; ಶಠ: ದುಷ್ಟ, ಧೂರ್ತ; ಅಳವಿ: ಯುದ್ಧ, ಹತ್ತಿರ; ಅವನೀಶ: ರಾಜ;

ಪದವಿಂಗಡಣೆ:
ಎನ್ನ+ ಲೆಕ್ಕಕೆ+ ಶಕುನಿ+ ಭೂಪತಿ
ನಿನ್ನೊಡನೆ +ಕೈಹೊಯ್ದನ್+ಒಡ್ಡವನ್
ಎನ್ನೊಡನೆ+ ಹೇಳೆಂದು +ನುಡಿದನು +ಕೌರವರರಾಯ
ನಿನ್ನೊಳಾಗಲಿ+ ನಿನ್ನ +ಮಾವನೆ
ಮುನ್ನಬರಲ್+ಇದಕೇನ್+ಎನುತೆ +ಸಂ
ಪನ್ನ +ಶಠರೊಡನ್+ಅಳವಿಗೊಟ್ಟ್+ಅವನೀಶನ್+ಇಂತೆಂದ

ಅಚ್ಚರಿ:
(೧) ರಾಯ, ಅವನೀಶ, ಭೂಪತಿ – ಸಮನಾರ್ಥಕ ಪದ
(೨) ದುರ್ಯೋಧನನನ್ನು ಸಂಪನ್ನ ಶಠರೊಡನ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ