ಕರೆಸಿದನು ಶಕುನಿಯನು ಕರ್ಣಂ
ಗರುಹಿದನು ಸೈಂಧವನನೆಕ್ಕಟಿ
ಗರೆದು ಹೇಳಿದ ಕೃತ್ರಿಮದ ಹಾಸಂಗಿಗಳ ರಚಿಸಿ
ಹರಸಿಕೊಂಡರು ಗಣಪ ಯಕ್ಷೇ
ಶ್ವರಿ ಕಳಾವತಿ ದುರ್ಗಿ ಭುವನೇ
ಶ್ವರಿಗಳಿಗೆ ವಿವಿಧೋಪಚಾರದ ಬಲಿ ವಿಧಾನದಲಿ (ಸಭಾ ಪರ್ವ, ೧೪ ಸಂಧಿ, ೨೧ ಪದ್ಯ)
ತಾತ್ಪರ್ಯ:
ದುರ್ಯೋಧನನು ಶಕುನಿಯನ್ನು ಕರೆಸಿದನು. ಕರ್ಣನಿಗೆ ತಿಳಿಸಿದನು. ಜಯದ್ರಥನನ್ನು ಏಕಾಂತದಲ್ಲಿ ಕರೆದು ಮೋಸದ ದಾಲಗಳನ್ನು ನಿಮಿಸಿದರು. ಗಣಪತಿ, ಯಕ್ಷೇಶ್ವರಿ, ಕಲಾವತಿ, ದುರ್ಗಾ, ಭುವನೇಶ್ವರಿ ದೇವತೆಗಳಿಗೆ ಬಲಿಯನ್ನು ಕೊಟ್ಟು ವಾಮಮಾರ್ಗದ ಅನೇಕ ಉಪಚಾರಗಳನ್ನು ಮಾಡಿ ಹರಕೆ ಮಾಡಿಕೊಂಡರು.
ಅರ್ಥ:
ಕರೆಸು: ಬರೆಮಾಡು, ಆಮಂತ್ರಿಸು; ಅರುಹು: ಹೇಳು; ಸೈಂಧವ: ಜಯದ್ರಥ; ಎಕ್ಕಟಿ: ಏಕಾಂತವಾದ; ಹೇಳು: ತಿಳಿಸು; ಕೃತ್ರಿಮ: ಮೋಸ; ಹಾಸಂಗಿ: ಜೂಜಿನ ದಾಳ; ರಚಿಸು: ನಿರ್ಮಿಸು; ಹರಸಿ: ಆಶೀರ್ವಾದ, ಸಂಕಲ್ಪ; ವಿವಿಧ; ಹಲವಾರು; ಉಪಚಾರ: ಸತ್ಕಾರ; ಬಲಿ: ಕಾಣಿಕೆ, ಕೊಡುಗೆ; ವಿಧಾನ; ರೀತಿ;
ಪದವಿಂಗಡಣೆ:
ಕರೆಸಿದನು +ಶಕುನಿಯನು +ಕರ್ಣಂಗ್
ಅರುಹಿದನು +ಸೈಂಧವನನ್+ಎಕ್ಕಟಿ
ಕರೆದು +ಹೇಳಿದ +ಕೃತ್ರಿಮದ +ಹಾಸಂಗಿಗಳ +ರಚಿಸಿ
ಹರಸಿಕೊಂಡರು +ಗಣಪ +ಯಕ್ಷೇ
ಶ್ವರಿ+ ಕಳಾವತಿ+ ದುರ್ಗಿ +ಭುವನೇ
ಶ್ವರಿಗಳಿಗೆ +ವಿವಿಧ+ಉಪಚಾರದ+ ಬಲಿ+ ವಿಧಾನದಲಿ
ಅಚ್ಚರಿ:
(೧) ಯಕ್ಷೇಶ್ವರಿ, ಭುವನೇಶ್ವರಿ – ಪ್ರಾಸ ಪದ