ಪದ್ಯ ೧೫: ಧರ್ಮಜನನ್ನು ಕಾಣಲು ಯಾರು ಬಂದರು?

ಬಂದು ಕಂಡುದು ನಿಖಿಳ ಪುರಜನ
ವಂದು ಕಾಣಿಕೆಗೊಟ್ಟು ಕೌರವ
ನಂದನರು ಸಚಿವರು ಪಸಾಯ್ತನಿಯೋಗಿ ಮಂತ್ರಿಗಳು
ಸಂದಣಿಸಿದುದು ಕವಿ ಗಮಕಿ ನಟ
ವಂದಿ ಮಾಗಧ ಮಲ್ಲಗಾಯಕ
ವೃಂದ ದೀನಾನಾಥರೋಲಗಿಸಿದರು ಧರ್ಮಜನ (ಸಭಾ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪಾಂಡವರು ಬಂದಿರುವುದನ್ನು ತಿಳಿದ ಹಸ್ತಿನಾಪುರದ ಜನರು ಅವರನ್ನು ನೋಡಲು ಬಂದರು. ಪುರದ ಜನ, ಕೌರವರ ಮಕ್ಕಳು, ಸಚಿವರು, ಆಪ್ತರು, ನಿಯೋಗಿಗಳು, ಮಂತ್ರಿಗಳು ಬಂದು ಯುಧಿಷ್ಠಿರನನ್ನು ಕಂಡು ಕಾಣಿಕೆಯನ್ನು ಕೊಟ್ಟರು. ಕವಿಗಳು, ಗಮಕಿಗಳು, ನಟರು, ವಂದಿಮಾಗಧರು, ಜಟ್ಟಿಗಳು, ಗಾಯಕರು, ದೀನರು, ಅನಾಥರು ಮೊದಲಾದವರು ಓಲಗಕ್ಕೆ ಬಂದರು.

ಅರ್ಥ:
ಬಂದು: ಆಗಮಿಸು; ಕಂಡು: ನೋಡಿ; ನಿಖಿಳ: ಎಲ್ಲಾ; ಪುರಜನ: ಊರಿನ ಜನ; ಕಾಣಿಕೆ: ಉಡುಗೊರೆ, ದಕ್ಷಿಣೆ; ನಂದನ: ಮಕ್ಕಳು; ಸಚಿವ: ಮಂತ್ರಿ; ಪಸಾಯ್ತ: ಸಾಮಂತರಾಜ; ನಿಯೋಗಿ: ವಿಶೇಷಾಧಿಕಾರಿ; ಮಂತ್ರಿ: ಸಚಿವ; ಸಂದಣಿ: ಗುಂಪು, ಸಮೂಹ; ಕವಿ: ಕಬ್ಬಿಗ; ಗಮಕಿ: ಹಾಡುವವ; ವಂದಿ ಮಾಗಧ: ಹೊಗಳುಭಟ್ಟರು; ಮಲ್ಲ: ಜಟ್ಟಿ; ಗಾಯಕ: ಹಾಡುಗಾರ; ವೃಂದ: ಗುಂಪು; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಓಲಗಿಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಂದು +ಕಂಡುದು +ನಿಖಿಳ +ಪುರಜನವ್
ಅಂದು +ಕಾಣಿಕೆಗೊಟ್ಟು +ಕೌರವ
ನಂದನರು+ ಸಚಿವರು+ ಪಸಾಯ್ತ+ನಿಯೋಗಿ +ಮಂತ್ರಿಗಳು
ಸಂದಣಿಸಿದುದು +ಕವಿ+ ಗಮಕಿ+ ನಟ
ವಂದಿ +ಮಾಗಧ+ ಮಲ್ಲ+ಗಾಯಕ
ವೃಂದ+ ದೀನ+ಅನಾಥರ್+ಓಲಗಿಸಿದರು+ ಧರ್ಮಜನ

ನಿಮ್ಮ ಟಿಪ್ಪಣಿ ಬರೆಯಿರಿ