ಪದ್ಯ ೧೪: ಸುಜನರು ದುಷ್ಟರ ವಿಷವನ್ನು ಅರಿಯಲು ಸಾಧ್ಯವೇ?

ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳುಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ (ಸಭಾ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮಾನ್ಯರಾದವರು, ಸುಜನರು ದುಷ್ಟರ ಹೃದಯದ ಕಾಳಕೂಟ ವಿಷವನ್ನು ತಿಳಿಯಲು ಸಾಧ್ಯವೇ? ಕೌರವರ ಲಲಿತವೂ ಮಧುರವೂ ಆದ ಮಾತುಗಳಿಗೆ ಮೋಸಹೋದರು. ಬೊಬ್ಬುಲಿಯ ವನವನ್ನು ಮರಿದುಂಬಿಯು ಹೊಕ್ಕರೆ ಅದಕ್ಕೇನು ಪ್ರಯೋಜನ? ಪಾಂಡವರು ತಮಗಾಗಿ ರಚಿಸಿದ ಬೇರೊಂದು ರಾಜಭವನದಲ್ಲಿದ್ದರು.

ಅರ್ಥ:
ಖಳ: ದುಷ್ಟ; ಹೃದಯ: ಎದೆ; ಕಾಳಕೂಟ: ಘೋರವಿಷ; ಹುಳುಕ: ಕ್ಷುದ್ರ ವ್ಯಕ್ತಿ, ನೀಚ; ಬಲ್ಲರು: ತಿಳಿದವರು; ಮಾನ್ಯರು: ಉತ್ತಮ, ಶ್ರೇಷ್ಠ; ಅವದಿರ: ಅವರ; ಲಲಿತ: ಚೆಲುವಾದ; ಮಧುರ: ಸಿಹಿಯಾದ, ಸವಿಯಾದ; ವಚೋವಿಳಾಸ: ಮಾತಿನ ಸೌಂದರ್ಯ; ಮರುಳು: ಬುದ್ಧಿಭ್ರಮೆ; ಅಳುಕು: ಹೆದರು; ಮಧುಕರ: ಜೇನು; ಮರಿ: ಚಿಕ್ಕ; ಬೊಬ್ಬುಲಿ: ದೊಡ್ಡ ಹುಲಿ; ವನ: ಕಾಡು; ನೃಪತಿಲಕ: ರಾಜಶ್ರೇಷ್ಠ; ಬೇರೆ: ಅನ್ಯ; ರಚಿಸು: ನಿರ್ಮಿಸು; ರಾಜಭವನ: ಅರಮನೆ;

ಪದವಿಂಗಡಣೆ:
ಖಳರ+ ಹೃದಯದ +ಕಾಳಕೂಟದ
ಹುಳುಕ +ಬಲ್ಲರೆ +ಮಾನ್ಯರ್+ಅವದಿರ
ಲಲಿತ +ಮಧುರ+ ವಚೋವಿಳಾಸಕೆ+ ಮರುಳುಗೊಂಡರಲೈ
ಅಳುಪಿದರೆ+ ಮಧುಕರನ+ ಮರಿ +ಬೊ
ಬ್ಬುಲಿಯ +ವನದೊಳಗ್+ಏನಹುದು +ನೃಪ
ತಿಲಕರಿದ್ದರು +ಬೇರೆ +ರಚಿಸಿದ +ರಾಜಭವನದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು

ನಿಮ್ಮ ಟಿಪ್ಪಣಿ ಬರೆಯಿರಿ