ಖಳರ ಹೃದಯದ ಕಾಳಕೂಟದ
ಹುಳುಕ ಬಲ್ಲರೆ ಮಾನ್ಯರವದಿರ
ಲಲಿತ ಮಧುರ ವಚೋವಿಳಾಸಕೆ ಮರುಳುಗೊಂಡರಲೈ
ಅಳುಪಿದರೆ ಮಧುಕರನ ಮರಿ ಬೊ
ಬ್ಬುಲಿಯ ವನದೊಳಗೇನಹುದು ನೃಪ
ತಿಲಕರಿದ್ದರು ಬೇರೆ ರಚಿಸಿದ ರಾಜಭವನದಲಿ (ಸಭಾ ಪರ್ವ, ೧೪ ಸಂಧಿ, ೧೪ ಪದ್ಯ)
ತಾತ್ಪರ್ಯ:
ಮಾನ್ಯರಾದವರು, ಸುಜನರು ದುಷ್ಟರ ಹೃದಯದ ಕಾಳಕೂಟ ವಿಷವನ್ನು ತಿಳಿಯಲು ಸಾಧ್ಯವೇ? ಕೌರವರ ಲಲಿತವೂ ಮಧುರವೂ ಆದ ಮಾತುಗಳಿಗೆ ಮೋಸಹೋದರು. ಬೊಬ್ಬುಲಿಯ ವನವನ್ನು ಮರಿದುಂಬಿಯು ಹೊಕ್ಕರೆ ಅದಕ್ಕೇನು ಪ್ರಯೋಜನ? ಪಾಂಡವರು ತಮಗಾಗಿ ರಚಿಸಿದ ಬೇರೊಂದು ರಾಜಭವನದಲ್ಲಿದ್ದರು.
ಅರ್ಥ:
ಖಳ: ದುಷ್ಟ; ಹೃದಯ: ಎದೆ; ಕಾಳಕೂಟ: ಘೋರವಿಷ; ಹುಳುಕ: ಕ್ಷುದ್ರ ವ್ಯಕ್ತಿ, ನೀಚ; ಬಲ್ಲರು: ತಿಳಿದವರು; ಮಾನ್ಯರು: ಉತ್ತಮ, ಶ್ರೇಷ್ಠ; ಅವದಿರ: ಅವರ; ಲಲಿತ: ಚೆಲುವಾದ; ಮಧುರ: ಸಿಹಿಯಾದ, ಸವಿಯಾದ; ವಚೋವಿಳಾಸ: ಮಾತಿನ ಸೌಂದರ್ಯ; ಮರುಳು: ಬುದ್ಧಿಭ್ರಮೆ; ಅಳುಕು: ಹೆದರು; ಮಧುಕರ: ಜೇನು; ಮರಿ: ಚಿಕ್ಕ; ಬೊಬ್ಬುಲಿ: ದೊಡ್ಡ ಹುಲಿ; ವನ: ಕಾಡು; ನೃಪತಿಲಕ: ರಾಜಶ್ರೇಷ್ಠ; ಬೇರೆ: ಅನ್ಯ; ರಚಿಸು: ನಿರ್ಮಿಸು; ರಾಜಭವನ: ಅರಮನೆ;
ಪದವಿಂಗಡಣೆ:
ಖಳರ+ ಹೃದಯದ +ಕಾಳಕೂಟದ
ಹುಳುಕ +ಬಲ್ಲರೆ +ಮಾನ್ಯರ್+ಅವದಿರ
ಲಲಿತ +ಮಧುರ+ ವಚೋವಿಳಾಸಕೆ+ ಮರುಳುಗೊಂಡರಲೈ
ಅಳುಪಿದರೆ+ ಮಧುಕರನ+ ಮರಿ +ಬೊ
ಬ್ಬುಲಿಯ +ವನದೊಳಗ್+ಏನಹುದು +ನೃಪ
ತಿಲಕರಿದ್ದರು +ಬೇರೆ +ರಚಿಸಿದ +ರಾಜಭವನದಲಿ
ಅಚ್ಚರಿ:
(೧) ಉಪಮಾನದ ಪ್ರಯೋಗ – ಅಳುಪಿದರೆ ಮಧುಕರನ ಮರಿ ಬೊಬ್ಬುಲಿಯ ವನದೊಳಗೇನಹುದು