ಪದ್ಯ ೧೩: ದುರ್ಯೋಧನನು ಮನಸ್ಸಿನಲ್ಲಿ ಏಕೆ ಸಂತಸಪಟ್ಟನು?

ಬೀಳುಕೊಟ್ಟಳು ಬಳಿಕ ಕುರುನೃಪ
ನಾಲಯಕೆ ನಡೆತಂದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು (ಸಭಾ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಾಂಧಾರಿಯು ಪಾಂಡವರನ್ನು ಕಳಿಸಿಕೊಟ್ಟಳು. ಅವರೆಲ್ಲರು ಅವರ ಬೀಡಿಗೆ ಹಿಂದಿರುಗಿದರು. ದುರ್ಯೋಧನನು ಪಾಂಡವರ ಬೀಡಿಗೆ ಬಂದು ಕುಂತಿಗೆ ನಮಸ್ಕರಿಸಿದನು. ಎಲ್ಲರನ್ನೂ ಉಚಿತವಾದ ಮಾತುಗಳಿಂದ ಉಪಾರಿಸಿದನು. ಮೋಸಗಾರರು, ಕಪಟಿಗಳಾದ ದುರ್ಯೋಧನ, ಶಕುನಿಗಳು ಮನಸ್ಸಿನಲ್ಲಿಯೇ ನಕ್ಕು, ಮರಿ ಜಿಂಕೆಯು ಬಲೆಯಲ್ಲಿ ಬಿದ್ದಿದೆ, ಬಾಣವನ್ನು ಹೂಡು ಎಂದುಕೊಂಡರು.

ಅರ್ಥ:
ಬೀಳುಕೊಡು: ತೆರಳು; ಬಳಿಕ: ನಂತರ; ನೃಪ: ರಾಜ; ಆಲಯ: ಮನೆ; ನಡೆ: ಚಲಿಸು; ಕಾಲು: ಪಾದ; ಎರಗು: ನಮಸ್ಕರಿಸು; ಉಚಿತ: ಸರಿಯಾದ; ಉಕ್ತಿ: ಮಾತು; ಮನ್ನಿಸು: ಗೌರವಿಸು; ಬಾಲ: ಚಿಕ್ಕ; ಮೃಗ: ಜಿಂಕೆ; ತೊಡು: ಹೂಡು; ಕೋಲ: ಬಾಣ; ನಗುತ: ಸಂತಸ; ಮನ: ಮನಸ್ಸು; ಕೌಳಿಕ: ಕಟುಕ, ಕಸಾಯಿಗಾರ, ಮೋಸ; ಕುಹಕಿ: ಮೋಸಗಾರ;

ಪದವಿಂಗಡಣೆ:
ಬೀಳುಕೊಟ್ಟಳು +ಬಳಿಕ +ಕುರುನೃಪನ್
ಆಲಯಕೆ +ನಡೆತಂದು +ಕುಂತಿಯ
ಕಾಲಿಗ್+ಎರಗಿದನ್+ಇವರನ್+ಉಚಿತ+ಉಕ್ತಿಯಲಿ +ಮನ್ನಿಸಿದ
ಬಾಲ+ಮೃಗವೊಳಗಾಯ್ತಲಾ +ತೊಡು
ಕೋಲನ್+ಎಂದರು +ನಗುತ+ ಮನದಲಿ
ಕೌಳಿಕದ+ ಕುಹಕಿಗಳು+ ಕೌರವರಾಯ +ಶಕುನಿಗಳು

ಅಚ್ಚರಿ:
(೧) ದುರ್ಯೊಧನನ ಮನಸ್ಸಿನ ಸಂತಸ – ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು
(೨) ಕ ಕಾರದ ತ್ರಿವಳಿ ಪದ – ಕೌಳಿಕದ ಕುಹಕಿಗಳು ಕೌರವರಾಯ

ನಿಮ್ಮ ಟಿಪ್ಪಣಿ ಬರೆಯಿರಿ