ಪದ್ಯ ೯: ಧೃತರಾಷ್ಟ್ರನು ಎಲ್ಲರನ್ನು ಹೇಗೆ ಸ್ವಾಗತಿಸಿದನು?

ಬಾ ಮಗನೆ ರಿಪುರಾಯಮನ್ಮಥ
ಭೀಮಬಾರೈ ಭೀಮರಣನಿ
ಸ್ಸೀಮ ಫಲುಗುಣ ಬಾ ನಕುಲ ಸಹದೇವ ಬಾ ಯೆನುತ
ಪ್ರೇಮರಸದಲಿ ಬೇರೆ ಬೇರು
ದ್ದಾಮ ಭುಜನಪ್ಪಿದನು ಚಿತ್ತದ
ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ (ಸಭಾ ಪರ್ವ, ೧೪ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಅತ್ಯಂತ ಪ್ರೀತಿಭಾವದಿಂದ, ಬಾ ಮಗನೇ ಯುಧಿಷ್ಠಿರ, ವೈರಿಗಳೆಂಬ ಮನ್ಮಥರಿಗೆ ಶಿವನಾದ ಭೀಮನೆ ಬಾ, ಯುದ್ಧದಲ್ಲಿ ಭಯಂಕರನಾದ ಅರ್ಜುನನೇ ಬಾ, ಬನ್ನಿ ನಕುಲ ಸಹದೇವರೆ ಎಂದು ಎಲ್ಲರನ್ನು ಪ್ರೀತಿಯ ರಸದಿಂದ ತಬ್ಬಿಕೊಂಡು ಬರೆಮಾಡಿದನು. ಅವನ ಮನಸ್ಸಿನ ತಾಮಸವು ತೋರುಗಾಣಿಕೆಯ ಪ್ರೀತಿಯಿಂದ ಮುಚ್ಚಿಹೋಯಿತು.

ಅರ್ಥ:
ಮಗ: ಪುತ್ರ; ರಿಪು: ವೈರಿ; ರಾಯ: ರಾಜ; ಮನ್ಮಥ: ಕಾಮ; ಭೀಮ: ಭಯಂಕರ; ರಣ: ಯುದ್ಧ; ನಿಸ್ಸೀಮ: ಪರಿಮಿತಿಯಿಲ್ಲದುದು; ಬಾ: ದಯಮಾಡಿಸು, ಆಗಮಿಸು; ಪ್ರೇಮ: ಒಲವು; ರಸ: ಸಾರ; ಉದ್ದಾಮ: ಶ್ರೇಷ್ಠ; ಭುಜ: ಬಾಹು; ಅಪ್ಪು: ತಬ್ಬಿಕೊ; ಚಿತ್ತ: ಮನಸ್ಸು; ತಾಮಸ: ಕತ್ತಲೆ, ಅಂಧಕಾರ; ತನಿ: ಪಕ್ವವಾದ; ಬೀಜ: ಉತ್ಪತ್ತಿ ಸ್ಥಾನ, ಮೂಲ, ಕಾರಣ; ಮುಸುಕು: ಆವರಿಸು; ಹರ್ಷ: ಸಂತಸ; ರಚನೆ: ನಿರ್ಮಾಣ;

ಪದವಿಂಗಡಣೆ:
ಬಾ +ಮಗನೆ +ರಿಪುರಾಯ+ಮನ್ಮಥ
ಭೀಮ+ಬಾರೈ+ ಭೀಮ+ರಣ+ನಿ
ಸ್ಸೀಮ +ಫಲುಗುಣ +ಬಾ +ನಕುಲ+ ಸಹದೇವ +ಬಾ +ಯೆನುತ
ಪ್ರೇಮರಸದಲಿ +ಬೇರೆ+ ಬೇರ್
ಉದ್ದಾಮ +ಭುಜನ್+ಅಪ್ಪಿದನು +ಚಿತ್ತದ
ತಾಮಸದ+ ತನಿಬೀಜ+ ಮುಸುಕಿತು +ಹರ್ಷ+ರಚನೆಯಲಿ

ಅಚ್ಚರಿ:
(೧) ಧೃತರಾಷ್ಟ್ರನ ಮನಸ್ಸನ್ನು ವರ್ಣಿಸುವ ಸಾಲು – ಚಿತ್ತದ ತಾಮಸದ ತನಿಬೀಜ ಮುಸುಕಿತು ಹರ್ಷರಚನೆಯಲಿ
(೨) ಭೀಮ ಪದದ ಬಳಕೆ – ಭೀಮಾ ಬಾರೈ, ಭೀಮರಣನಿಸ್ಸೀಮ

ನಿಮ್ಮ ಟಿಪ್ಪಣಿ ಬರೆಯಿರಿ