ಪದ್ಯ ೭: ಊರಿನವರು ಪಾಂಡವರನ್ನು ಹೇಗೆ ಸ್ವಾಗತಿಸಿದರು?

ಪೌರನಾರೀಜನದ ತಳಿಗೆಗ
ಳಾರತಿಯ ಸೇಸೆಗಳ ಲಾಜೆಯ
ತೋರಮುತ್ತಿನ ಮಳೆಯ ಮಂಗಳರವದ ಕಳಕಳದ
ಓರಣದ ತೋರಣದ ಗುಡಿಗಳ
ಚಾರುವೀಧಿಗಳೊಳಗೆ ಬಂದರು
ಭೂರಮಣರುತ್ಸಾಹದಲಿ ಧೃತರಾಷ್ಟ್ರನರಮನೆಗೆ (ಸಭಾ ಪರ್ವ, ೧೪ ಸಂಧಿ, ೭ ಪದ್ಯ)

ತಾತ್ಪರ್ಯ:
ಪುರ ಸ್ತ್ರೀಯರು ಹಿಡಿದ ಆರತಿಯ ತಟ್ಟೆಗಳು, ಅವರಿಟ್ಟ ಸೇಸೆ, ಅರಳಿನ ಮಳೆ, ಮುತ್ತಿನ ಮಳೆ, ಮಂಗಳವಾದ್ಯಗಳ ಇಂಪಾದ ಸದ್ದು, ಓರಣವಾಗಿ ತೋರಣಕಟ್ಟಿ ಧ್ವಜಗಳನ್ನೇರಿಸಿದ ಸುಂದರವಾದ ಬೀದಿಗಳನ್ನು ನೋಡುತ್ತಾ ಪಾಂಡವರು ಹಸ್ತಿನಾಪುರದೊಳಗೆ ನಡೆಯುತ್ತಾ ಧೃತರಾಷ್ಟ್ರನ ಅರಮನೆಗೆ ಬಂದರು.

ಅರ್ಥ:
ಪೌರ: ಊರು; ನಾರಿ: ಹೆಣ್ಣು; ಜನ: ಮನುಷ್ಯ, ಗುಂಪು; ತಳಿಗೆ: ತಟ್ಟೆ; ಆರತಿ: ನೀರಾಜನ; ಸೇಸೆ: ಮಂಗಳಾಕ್ಷತೆ; ಲಾಜೆ: ಭತ್ತದ ಹರಳು; ಮುತ್ತು: ಬೆಲೆಬಾಳುವ ರತ್ನ; ಮಳೆ: ವರ್ಷ; ಮಂಗಳ: ಶುಭ; ರವ: ಶಬ್ದ; ಕಳಕಳ: ಉದ್ವಿಗ್ನತೆ; ಓರಣ: ಕ್ರಮ, ಸಾಲು; ತೋರಣ: ಬಾಗಿಲಿಗೆ ಕಟ್ಟುವ ತಳಿರು; ಗುಡಿ: ಧ್ವಜ; ಚಾರು: ಸುಂದರ; ವೀಧಿ: ಬೀದಿ, ಮಾರ್ಗ; ಬಂದರು: ಆಗಮಿಸು; ಭೂರಮಣ: ರಾಜ; ಉತ್ಸಾಹ: ಹುರುಪು, ಆಸಕ್ತಿ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಪೌರ+ನಾರೀಜನದ +ತಳಿಗೆಗಳ್
ಆರತಿಯ +ಸೇಸೆಗಳ +ಲಾಜೆಯ
ತೋರ+ಮುತ್ತಿನ +ಮಳೆಯ +ಮಂಗಳ+ರವದ +ಕಳಕಳದ
ಓರಣದ+ ತೋರಣದ +ಗುಡಿಗಳ
ಚಾರು+ವೀಧಿಗಳ್+ಒಳಗೆ +ಬಂದರು
ಭೂರಮಣರ್+ಉತ್ಸಾಹದಲಿ +ಧೃತರಾಷ್ಟ್ರನ್+ಅರಮನೆಗೆ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುತ್ತಿನ ಮಳೆಯ ಮಂಗಳರವದ
(೨) ಓರಣ, ತೋರಣ, ಭೂರಮಣ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ