ಪದ್ಯ ೧೦: ಧೃತರಾಷ್ಟ್ರನ ನಂತರ ಯಾರ ಬಳಿಗೆ ಪಾಂಡವರು ಹೋದರು?

ಹರಸಿದನು ಕಾಣಿಕೆಯ ಕೊಂಡೈ
ವರ ಮಹಾಸತಿಯನು ಕುಮಾರರ
ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷಮಿಗಲೈತಂದರಾ ಗಾಂಧಾರಿಯರಮನೆಗೆ (ಸಭಾ ಪರ್ವ, ೧೪ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಪಾಂಡವರನ್ನು, ಅವರ ಪತ್ನಿ, ಅಂತಃಪುರದ ಜನರನ್ನು ಹರಸಿ, ಕಾಣಿಕೆಯನ್ನು ಸ್ವೀಕರಿಸಿ ಮಧುರವಾದ ಮಾತುಗಳಿಂದ ಉಪಚರಿಸಿದನು. ಗಾಂಧಾರಿಯನ್ನು ಕಾಣಲು ಹೋಗಿರೆಂದು ಧೃತರಾಷ್ಟ್ರನು ಹೇಳಲು ಅವರೆಲ್ಲರು ಗಾಂಧಾರಿಯ ಬಳಿಗೆ ಬಂದರು.

ಅರ್ಥ:
ಹರಸು: ಆಶೀರ್ವದಿಸು; ಕಾಣಿಕೆ: ಉಡುಗೊರೆ; ಕೊಂಡು: ತೆಗೆದು; ವರ: ಶ್ರೇಷ್ಠ; ಮಹಾಸತಿ: ಪತಿವ್ರತೆ; ಕುಮಾರ: ಮಕ್ಕಳು; ಅರಸಿ: ರಾಣಿ; ಅನಿಬರು: ಅಷ್ಟು ಜನ; ವಚೋರಾನೆ: ಮಾತಿನಲ್ಲಿ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಅರಸ: ರಾಜ; ವಂದಿಸು: ನಮಸ್ಕರಿಸು; ದರುಶನ: ನೋಟ; ಕೊಡು: ನೀಡು; ಹರುಷ: ಸಂತೋಷ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಹರಸಿದನು +ಕಾಣಿಕೆಯ +ಕೊಂಡ್
ಐವರ +ಮಹಾಸತಿಯನು +ಕುಮಾರರನ್
ಅರಸಿಯರ್+ಅನಿಬರ +ವಚೋರಚನೆಯಲಿ +ಮನ್ನಿಸಿದ
ಅರಸ+ ಗಾಂಧಾರಿಯನು +ವಂದಿಸಿ
ದರುಶನವ+ ಕೊಡು +ಹೋಗ್+ಎನಲು +ಕಡು
ಹರುಷಮಿಗಲೈತಂದರಾ+ ಗಾಂಧಾರಿ+ಅರಮನೆಗೆ

ಅಚ್ಚರಿ:
(೧) ಹರಸಿ, ಅರಸಿ – ಪ್ರಾಸ ಪದ
(೨) ಮಾತಾಡಿದರು ಎಂದು ಹೇಳಲು – ವಚೋರಚನೆ ಪದದ ಬಳಕೆ
(೩) ದ್ರೌಪದಿಯನ್ನು ಮಹಾಸತಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ