ಹರಸಿದನು ಕಾಣಿಕೆಯ ಕೊಂಡೈ
ವರ ಮಹಾಸತಿಯನು ಕುಮಾರರ
ನರಸಿಯರನನಿಬರ ವಚೋರಚನೆಯಲಿ ಮನ್ನಿಸಿದ
ಅರಸ ಗಾಂಧಾರಿಯನು ವಂದಿಸಿ
ದರುಶನವ ಕೊಡು ಹೋಗೆನಲು ಕಡು
ಹರುಷಮಿಗಲೈತಂದರಾ ಗಾಂಧಾರಿಯರಮನೆಗೆ (ಸಭಾ ಪರ್ವ, ೧೪ ಸಂಧಿ, ೧೦ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನು ಪಾಂಡವರನ್ನು, ಅವರ ಪತ್ನಿ, ಅಂತಃಪುರದ ಜನರನ್ನು ಹರಸಿ, ಕಾಣಿಕೆಯನ್ನು ಸ್ವೀಕರಿಸಿ ಮಧುರವಾದ ಮಾತುಗಳಿಂದ ಉಪಚರಿಸಿದನು. ಗಾಂಧಾರಿಯನ್ನು ಕಾಣಲು ಹೋಗಿರೆಂದು ಧೃತರಾಷ್ಟ್ರನು ಹೇಳಲು ಅವರೆಲ್ಲರು ಗಾಂಧಾರಿಯ ಬಳಿಗೆ ಬಂದರು.
ಅರ್ಥ:
ಹರಸು: ಆಶೀರ್ವದಿಸು; ಕಾಣಿಕೆ: ಉಡುಗೊರೆ; ಕೊಂಡು: ತೆಗೆದು; ವರ: ಶ್ರೇಷ್ಠ; ಮಹಾಸತಿ: ಪತಿವ್ರತೆ; ಕುಮಾರ: ಮಕ್ಕಳು; ಅರಸಿ: ರಾಣಿ; ಅನಿಬರು: ಅಷ್ಟು ಜನ; ವಚೋರಾನೆ: ಮಾತಿನಲ್ಲಿ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ಅರಸ: ರಾಜ; ವಂದಿಸು: ನಮಸ್ಕರಿಸು; ದರುಶನ: ನೋಟ; ಕೊಡು: ನೀಡು; ಹರುಷ: ಸಂತೋಷ; ಅರಮನೆ: ರಾಜರ ಆಲಯ;
ಪದವಿಂಗಡಣೆ:
ಹರಸಿದನು +ಕಾಣಿಕೆಯ +ಕೊಂಡ್
ಐವರ +ಮಹಾಸತಿಯನು +ಕುಮಾರರನ್
ಅರಸಿಯರ್+ಅನಿಬರ +ವಚೋರಚನೆಯಲಿ +ಮನ್ನಿಸಿದ
ಅರಸ+ ಗಾಂಧಾರಿಯನು +ವಂದಿಸಿ
ದರುಶನವ+ ಕೊಡು +ಹೋಗ್+ಎನಲು +ಕಡು
ಹರುಷಮಿಗಲೈತಂದರಾ+ ಗಾಂಧಾರಿ+ಅರಮನೆಗೆ
ಅಚ್ಚರಿ:
(೧) ಹರಸಿ, ಅರಸಿ – ಪ್ರಾಸ ಪದ
(೨) ಮಾತಾಡಿದರು ಎಂದು ಹೇಳಲು – ವಚೋರಚನೆ ಪದದ ಬಳಕೆ
(೩) ದ್ರೌಪದಿಯನ್ನು ಮಹಾಸತಿ ಎಂದು ಕರೆದಿರುವುದು