ಸೇನೆ ಬಿಟ್ಟುದು ಪುರದ ಬಹಿರೋ
ದ್ಯಾನ ವೀಧಿಗಳೊಳಗೆ ಕುಂತೀ
ಸೂನುಗಳು ಸುಮ್ಮಾನಮಿಗೆ ನಡೆತಂದರಿಭಪುರಿಗೆ
ಆ ನಗರದೊತ್ತೊತ್ತೆಗಳನಾ
ಮಾನಿನಿಯರುಪ್ಪಾರತಿಯ ನವ
ರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ (ಸಭಾ ಪರ್ವ, ೧೪ ಸಂಧಿ, ೬ ಪದ್ಯ)
ತಾತ್ಪರ್ಯ:
ಪಾಂಡವರ ಸೇನೆಯು ಊರಹೊರಗಿನ ಉದ್ಯಾನದಲ್ಲಿ ಬೀಡು ಬಿಟ್ಟಿತು, ಪಾಂಡವರು ಹಸ್ತಿನಾಪುರವನ್ನು ಹೊಕ್ಕರು. ಜನ ಗುಂಪುಗುಂಪಾಗಿ ಅವರನ್ನು ನೋಡಲು ಸೇರಿದ್ದರು. ನಗರದ ಹೆಣ್ಣುಮಕ್ಕಳು ಪಾಂಡವರಿಗೆ ಉಪ್ಪಿನಾರತಿಯನ್ನು ಎತ್ತಿದರು. ಉಪ್ಪಾರತಿಯ ಬೆಳಕನ್ನೂ ಬಿಸಿಲಿನ ತಾಪವನ್ನು ಆ ಹೆಂಗಳೆಯರ ಮುಖಚಂದ್ರಗಳು ತಂಪುಮಾಡುತ್ತಿದ್ದವು.
ಅರ್ಥ:
ಸೇನೆ: ಸೈನ್ಯ; ಬಿಟ್ಟು: ತೊರೆ; ಪುರ: ಊರು; ಬಹಿರ: ಹೊರಗೆ; ಉದ್ಯಾನ: ಕೈತೋಟ; ವೀಧಿ: ದಾರಿ, ಮಾರ್ಗ; ಸೂನು: ಮಕ್ಕಳು; ಸುಮ್ಮಾನ: ವಿನೋದ, ಸಂತೋಷ; ಮಿಗೆ: ಅಧಿಕವಾಗಿ; ಇಭಪುರಿ: ಹಸ್ತಿನಾಪುರ; ಇಭ: ಆನೆ; ನಗರ: ಊರು; ಮಾನಿನಿ: ಹೆಣ್ಣು; ಉಪ್ಪಾರತಿ: ಉಪ್ಪಿನ ಆರತಿ, ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ನವ: ಹೊಸ; ಆನನ: ಮುಖ; ಇಂದು: ಚಂದ್ರ; ಪ್ರಭೆ: ಕಾಂತಿ; ವಿಭಾಡಿಸು: ನಾಶಮಾಡು; ಬಿಸಿಲು: ಸೂರ್ಯನ ಶಾಖ; ಬೇಗೆ:ತಾಪ, ಕಾವು;
ಪದವಿಂಗಡಣೆ:
ಸೇನೆ +ಬಿಟ್ಟುದು +ಪುರದ +ಬಹಿರ
ಉದ್ಯಾನ +ವೀಧಿಗಳ್+ಒಳಗೆ+ ಕುಂತೀ
ಸೂನುಗಳು +ಸುಮ್ಮಾನಮಿಗೆ+ ನಡೆತಂದರ್+ಇಭಪುರಿಗೆ
ಆ+ ನಗರದೊತ್ತೊತ್ತೆಗಳನ್+ಆ
ಮಾನಿನಿಯರ್+ಉಪ್ಪಾರತಿಯ+ ನವರ್
ಆನನ+ಇಂದು +ಪ್ರಭೆ +ವಿಭಾಡಿಸೆ +ಬಿಸಿಲ +ಬೇಗೆಗಳ
ಅಚ್ಚರಿ:
(೧) ಸುಂದರವಾದ ಕಲ್ಪನೆ – ಹೇಗೆ ಆರತಿಯ ತಾಪವು ಕಡಿಮೆಯಾಯಿತು – ಆ ನಗರದೊತ್ತೊತ್ತೆಗಳನಾ ಮಾನಿನಿಯರುಪ್ಪಾರತಿಯ ನವರಾನನೇಂದು ಪ್ರಭೆ ವಿಭಾಡಿಸೆ ಬಿಸಿಲ ಬೇಗೆಗಳ