ಪದ್ಯ ೯೯: ಪಯಣವು ಹೇಗೆ ಸಾಗಿತ್ತು?

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು (ಸಭಾ ಪರ್ವ, ೧೩ ಸಂಧಿ, ೯೯ ಪದ್ಯ)

ತಾತ್ಪರ್ಯ:
ಪಯಣದ ಮುಂದಿನ ಸಾಲಿನಲ್ಲಿ ನಕುಲನೇ ಮೊದಲಾದವರ ಸೈನ್ಯಗಳು ನಡೆದವು. ಪಾಂಡವರ ಮಕ್ಕಳು ಮುಂದೆ ಹೋಗುತ್ತಿದ್ದರು. ಹಿಂಭಾಗದಲ್ಲಿ ರಾಣಿವಾಸದವರ ಪಲ್ಲಕ್ಕಿಗಳು ಎರಡು ಸಾಲಿನಲ್ಲಿ ಬರುತ್ತಿದ್ದವು. ರಾಣಿವಾಸದವರ ಪಲ್ಲಕ್ಕಿಗಳು ಮಣಿ ಖಚಿತವಾಗಿದ್ದು ಅವುಗಳ ಬಾಗಿಲುಗಳನ್ನು ಬೀಗದಿಂದ ಭದ್ರಪಡಿಸಿದ್ದರು.

ಅರ್ಥ:
ಮುಂದೆ: ಮೊದಲು; ಮೋಹರ: ಸೈನ್ಯ, ದಂಡು; ತೆಗೆದು: ಹೊರತಂದು; ನಡೆ: ಚಲಿಸು; ಸಂದಣಿ: ಗುಂಪು, ಸಮೂಹ; ಭೂಪ: ರಾಜ; ಹಿಂದೆ: ಹಿಂಭಾಗದಲ್ಲಿ; ಮಣಿ: ಬೆಲಬಾಳುವ ರತ್ನ; ಕೇವಣ: ತಳ್ಳುವುದು, ನೂಕುವುದು; ಗೊಂದಣ: ಗುಂಪು, ಹಿಂಡು; ಹೆಮ್ಮಕ್ಕಳು: ಹಿರಿಯ ಮಕ್ಕಳು; ಅಂದಣ: ಸುಂದರ; ಸಂದಣಿ: ಗುಂಪು, ಸಮೂಹ; ಅನಿಬರು: ಅಷ್ಟುಜನ; ರಾಣಿ: ಅರಸಿ; ದಂಡಿಗೆ: ಪಲ್ಲಕ್ಕಿ;

ಪದವಿಂಗಡಣೆ:
ಮುಂದೆ +ಮೋಹರ +ತೆಗೆದು +ನಡೆದುದು
ಸಂದಣಿಸಿ +ನಕುಲಾದಿ +ಭೂಪರು
ಹಿಂದೆ +ಮಣಿಕೇವಣದ+ ದಡ್ಡಿಯ +ಬಿಗಿದ +ಬೀಯಗದ
ಗೊಂದಣದ +ಹೆಮ್ಮಕ್ಕಳ್+ಇದ್ದೆಸೆ
ಅಂದಣದ +ಸಂದಣಿಗಳಲಿ+ ನಡೆ
ತಂದವ್+ಅನಿಬರ+ ರಾಣಿವಾಸದ+ ದಂಡಿಗೆಗಳ್+ಅಂದು

ಅಚ್ಚರಿ:
(೧) ಣ ಕಾರದಿಂದ ಕೊನೆಗೊಳ್ಳುವ ಪದಗಳ ಬಳಕೆ – ಗೊಂದಣ, ಅಂದಣ, ಸಂದಣಿ, ಕೇವಣ, ಮಣಿ, ರಾಣಿ

ನಿಮ್ಮ ಟಿಪ್ಪಣಿ ಬರೆಯಿರಿ