ಪದ್ಯ ೯೫: ಧರ್ಮರಾಯನ ನಿಶ್ಚಯವೇನು?

ಕರೆಸುವನು ಧೃತರಾಷ್ಟ್ರ ನಮ್ಮನು
ಕರೆವ ಮಣಿಹ ಸುಯೋಧನಾದ್ಯರ
ಮರುಳುಗಳ ಮಾತೇನು ಹಿತವರು ನೀವಲಾ ನನಗೆ
ಧರಣಿಯಿದು ಶಾಶ್ವತವೆ ತಂದೆಗೆ
ಹಿರಿಯನಾ ಧೃತರಾಷ್ಟ್ರನಾಜ್ಞೆಯ
ಶಿರದೊಳಾಂತೆನು ಬಹೆನೆನುತ ನಿಶ್ಚೈಸಿದನು ನೃಪತಿ (ಸಭಾ ಪರ್ವ, ೧೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನು ನಮ್ಮನ್ನು ಕರೆಯುತ್ತಿದ್ದಾನೆ, ನಾವು ತಲೆಬಾಗಿ ಅವರ ಕರೆಯನ್ನು ಮನ್ನಿಸೋಣ. ದುರ್ಯೋಧನನೇ ಮೊದಲಾದವರ ಮೂಢರ ಮಾತನ್ನು ನಾವೇಕೆ ಲೆಕ್ಕಿಸಬೇಕು? ನೀವುಗಳು ನನಗೆ ಹಿತೈಶಿಗಳು. ಭೀಮಿಯೊಡೆತನ ಶಾಶ್ವತವಲ್ಲ, ದೊಡ್ಡಪ್ಪನ ಮಾತನ್ನು ತಲೆಯ ಮೇಲೆ ಹೊತ್ತು ಬರುತ್ತೇನೆ ಎಂದು ಯುಧಿಷ್ಠಿರನು ನಿಶ್ಚೈಸಿದನು.

ಅರ್ಥ:
ಕರೆಸು: ಬರೆಮಾಡು; ಮಣಿ: ಬಾಗು; ಆದಿ: ಮುಂತಾದ; ಮರುಳು: ಮೂಢ; ಮಾತು: ವಾಣಿ; ಹಿತ: ಒಳ್ಳೆಯದನ್ನು ಹಾರೈಸುವವನು; ಧರಣಿ: ಭೂಮಿ; ಶಾಶ್ವತ: ನಿತ್ಯವಾದುದು; ಹಿರಿ: ದೊಡ್ಡವ; ಆಜ್ಞೆ: ಅಪ್ಪಣೆ; ಶಿರ: ತಲೆ; ಬಹೆ: ಬರುವೆ; ನಿಶ್ಚೈಸು: ನಿರ್ಧಾರ ಮಾಡು; ತಂದೆ: ಪಿತ;

ಪದವಿಂಗಡಣೆ:
ಕರೆಸುವನು +ಧೃತರಾಷ್ಟ್ರ +ನಮ್ಮನು
ಕರೆವ +ಮಣಿಹ +ಸುಯೋಧನಾದ್ಯರ
ಮರುಳುಗಳ +ಮಾತೇನು +ಹಿತವರು +ನೀವಲಾ+ ನನಗೆ
ಧರಣಿಯಿದು +ಶಾಶ್ವತವೆ ತಂದೆಗೆ
ಹಿರಿಯನಾ+ ಧೃತರಾಷ್ಟ್ರನ್+ಆಜ್ಞೆಯ
ಶಿರದೊಳಾಂತೆನು+ ಬಹೆನೆನುತ+ ನಿಶ್ಚೈಸಿದನು +ನೃಪತಿ

ನಿಮ್ಮ ಟಿಪ್ಪಣಿ ಬರೆಯಿರಿ