ಪದ್ಯ ೮೪: ವಿದುರನು ದಿನವನ್ನು ಹೇಗೆ ಕಳೆದನು?

ಪಾವುಡಂಗಳನಿತ್ತು ಭೂಪನ
ನೋವಿದನು ನಾನಾ ಕಥಾ ಸಂ
ಭಾವನಾಂನಂತರದ ಮಜ್ಜನ ಭೋಜನಾದಿಗಳ
ಆ ವಿವಿಧ ಸತ್ಕಾರದಲಿ ದಿವ
ಸಾವಸಾನವ ಕಳೆದು ಬಳಿಕ ಸ
ಭಾವಳಯದಲಿ ಪಾಂಡುಸುತರಿಗೆ ನುಡಿದನಾ ವಿದುರ (ಸಭಾ ಪರ್ವ, ೧೩ ಸಂಧಿ, ೮೪ ಪದ್ಯ)

ತಾತ್ಪರ್ಯ:
ಕೌರವರು ಕಳಿಸಿದ್ದ ಉಡುಗೊರೆಗಳನ್ನು ವಿದುರನು ಯುಧಿಷ್ಠಿರನಿಗೆ ಕೊಟ್ಟನು. ಅನೇಕ ಧರ್ಮ ಕಥಾಪ್ರಸಂಗಗಳನ್ನು ಹೇಳಿ ಸಂತೋಷಪಡಿಸಿದನು. ಸ್ನಾನ ಭೋಜನಗಳಾದ ಮೇಲೆ ಸಂಜೆಯನ್ನು ಕಳೆದು, ರಾತ್ರಿಯ ಓಲಗದಲ್ಲಿ ವಿದುರನು ಪಾಂಡವರಿಗೆ ಹೀಗೆಂದು ಹೇಳಿದನು.

ಅರ್ಥ:
ಪಾವುಡ: ಬಟ್ಟೆ, ವಸ್ತ್ರ; ಭೂಪ: ರಾಜ; ಓವು: ರಕ್ಷಿಸು, ಕಾಪಾಡು; ನಾನಾ: ಹಲವಾರು; ಸಂಭಾವನ: ಉಡುಗೊರೆ;ಆನಂತರ: ಬಳಿಕ; ಮಜ್ಜನ: ಸ್ನಾನ; ಭೋಜನ: ಊಟ; ಆದಿ: ಮುಂತಾದ; ವಿವಿಧ: ಹಲವಾರು; ಸತ್ಕಾರ: ಗೌರವ; ದಿವಸ: ದಿನ; ಅವಸಾನ: ಕೊನೆ; ಕಳೆದು: ಸಂದುಹೋಗು; ಬಳಿಕ: ನಂತರ; ಸಭಾವಳಯ: ಸಭೆಯ ಪ್ರದೇಶ; ಸುತ: ಮಕ್ಕಳು; ನುಡಿ: ಮಾತಾಡು;

ಪದವಿಂಗಡಣೆ:
ಪಾವುಡಂಗಳನಿತ್ತು+ ಭೂಪನನ್
ಓವಿದನು+ ನಾನಾ +ಕಥಾ +ಸಂ
ಭಾವನಾಂನ್+ಅಂತರದ+ ಮಜ್ಜನ +ಭೋಜನಾದಿಗಳ
ಆ +ವಿವಿಧ +ಸತ್ಕಾರದಲಿ +ದಿವ
ಸ+ಅವಸಾನವ +ಕಳೆದು +ಬಳಿಕ+ ಸ
ಭಾವಳಯದಲಿ+ ಪಾಂಡುಸುತರಿಗೆ+ ನುಡಿದನಾ +ವಿದುರ

ಅಚ್ಚರಿ:
(೧) ಸಂಭಾವ, ಸಭಾವ – ಪದಗಳ ಬಳಕೆ
(೨) ಸಂಜೆ ಎಂದು ಹೇಳಲು – ದಿವಸಾವಸಾನವ ಕಳೆದು

ನಿಮ್ಮ ಟಿಪ್ಪಣಿ ಬರೆಯಿರಿ