ಕರೆಸುವನು ಧೃತರಾಷ್ಟ್ರಗಡ ನ
ಮ್ಮರಸನಲಿ ಧೃತರಾಷ್ಟ್ರನಲಿ ನಮ
ಗೆರಡು ಮನವೇ ಭಾವ ಭೇದವೆ ಪಾಂಡು ಬೊಪ್ಪನಲಿ
ವರವೆ ದೊರಕಲಿ ಶಾಪವೇ ಮೇ
ಣ್ಬರಲಿ ಭಯವಿಲ್ಲೆಮಗೆ ಬೊಪ್ಪನ
ಕರಣ ಕೃತಿಗೆ ಹಸಾದವೆಂದನು ಧರ್ಮನಂದನನು (ಸಭಾ ಪರ್ವ, ೧೩ ಸಂಧಿ, ೮೮ ಪದ್ಯ)
ತಾತ್ಪರ್ಯ:
ವಿದುರನ ಮಾತಿಗೆ ಧರ್ಮರಾಯನು, ಕರೆಯುತ್ತಿರುವವನು ಧೃತರಾಷ್ಟ್ರ ನಮ್ಮ ದೊಡ್ಡಪ್ಪ, ಅವರಲ್ಲಿ ನಮ್ಮ ತಂದೆ ಪಾಂಡುವಿನಲ್ಲಿ ನಮಗೆ ಭೇದವಿಲ್ಲ. ನಾವು ಹೋಗುವುದರಿಂದ ನಮಗೆ ವರ ಸಿಕ್ಕರೂ ಶಾಪ ಸಿಕ್ಕರೂ ನಮಗೆ ಭಯವಿಲ್ಲ. ದೊಡ್ಡಪ್ಪನ ಮನಸ್ಸಿನ ಸಂಕಲ್ಪಕ್ಕೆ ನಾವು ಬದ್ಧರು ಅವರ ಆಜ್ಞೆಯೇ ನಮಗೆ ಪ್ರಸಾದ ಎಂದು ಧರ್ಮರಾಯನು ತಿಳಿಸಿದನು.
ಅರ್ಥ:
ಕರೆಸು: ಬರೆಮಾಡು; ಗಡ: ಅಲ್ಲವೆ; ಅರಸ: ರಾಜ, ತಂದೆ; ಎರಡು: ದ್ವಂದ್ವ, ಭೇದ; ಮನ: ಮನಸ್ಸು; ಭಾವ: ಭಾವನೆ, ಚಿತ್ತವೃತ್ತಿ; ಭೇದ: ಮುರಿ, ಸೀಳು; ಬೊಪ್ಪ: ತಂದೆ; ವರ: ಅನುಗ್ರಹ; ದೊರಕು: ಸಿಕ್ಕು; ಶಾಪ: ನಿಷ್ಠುರದ ನುಡಿ; ಮೇಣ್: ಅಥವಾ; ಭಯ: ಅಂಜಿಕೆ; ಕರಣ: ಕಿವಿ, ಮನಸ್ಸು; ಕೃತಿ: ಕೆಲಸ; ಹಸಾದ: ಪ್ರಸಾದ, ಅನುಗ್ರಹ; ನಂದನ: ಮಗ;
ಪದವಿಂಗಡಣೆ:
ಕರೆಸುವನು +ಧೃತರಾಷ್ಟ್ರ+ಗಡ+ ನಮ್ಮ್
ಅರಸನಲಿ+ ಧೃತರಾಷ್ಟ್ರನಲಿ+ ನಮಗ್
ಎರಡು +ಮನವೇ +ಭಾವ +ಭೇದವೆ+ ಪಾಂಡು +ಬೊಪ್ಪನಲಿ
ವರವೆ +ದೊರಕಲಿ +ಶಾಪವೇ+ ಮೇಣ್
ಬರಲಿ+ ಭಯವಿಲ್+ಎಮಗೆ +ಬೊಪ್ಪನ
ಕರಣ +ಕೃತಿಗೆ +ಹಸಾದವೆಂದನು +ಧರ್ಮನಂದನನು
ಅಚ್ಚರಿ:
(೧) ಧರ್ಮರಾಯನ ದಿಟ್ಟನುಡಿ: ವರವೆ ದೊರಕಲಿ ಶಾಪವೇ ಮೇಣ್ಬರಲಿ ಭಯವಿಲ್ಲೆಮಗೆ
(೨) ಧರ್ಮರಾಯನ ನಿರ್ಮಲ ಮನಸ್ಸು – ನಮ್ಮರಸನಲಿ ಧೃತರಾಷ್ಟ್ರನಲಿ ನಮಗೆರಡು ಮನವೇ ಭಾವ ಭೇದವೆ ಪಾಂಡು ಬೊಪ್ಪನಲಿ
(೩) ಧೃತರಾಷ್ಟ್ರ – ೧, ೨ ಸಾಲಿನ ಮೊದಲ ಪದ