ಶುಭ ಮುಹೂರ್ತ ವಿಳಾಸಲಗ್ನದೊ
ಳಿಭಪುರಿಯ ಒರವಂಟು ಸುರ ಸ
ನ್ನಿಭನು ಬಂದನು ಹಲವು ಪಯಣದಲಿವರ ಪಟ್ಟಣಕೆ
ರಭಸ ಮಿಗಿಲಿದಿರ್ಗೊಂಡು ತಂದರು
ಸಭೆಗೆ ಮಾನ್ಯ ಯಥೋಪಚಾರ
ಪ್ರಭವ ಸತ್ಕಾರದಲಿ ಕೇಳ್ದರು ಕುಶಲ ಸಂಗತಿಯ (ಸಭಾ ಪರ್ವ, ೧೩ ಸಂಧಿ, ೮೨ ಪದ್ಯ)
ತಾತ್ಪರ್ಯ:
ಒಂದು ಶುಭ ಮುಹೂರ್ತ, ಶುಭ ಲಗ್ನದಲ್ಲಿ ದೇವತೆಗಳಿಗೆ ಸಮಾನನಾದ ವಿದುರನು ಹಸ್ತಿನಾಪುರದಿಂದ ಪಾಂಡವರನ್ನು ಭೇಟಿಯಾಗಲು ಹೊರಟನು. ಹಲವು ದಿನಗಳ ಕಾಲ ಪ್ರಯಾಣವನ್ನು ಮಾಡಿ ಇಂದ್ರಪ್ರಸ್ಥನಗರಕ್ಕೆ ಬಂದನು. ಪಾಂಡವರು ಮಹಾ ವೈಭವದಿಂದ ವಿದುರನನ್ನು ಸ್ವಾಗತಿಸಿ, ಉಚಿತ ಸತ್ಕಾರವನ್ನು ಮಾಡಿ ಕ್ಷೇಮ ಸಮಾಚಾರವನ್ನು ಕೇಳಿದರು.
ಅರ್ಥ:
ಶುಭ: ಮಂಗಳ; ಮುಹೂರ್ತ: ಸಮಯ; ವಿಲಾಸ: ಉಲ್ಲಾಸ, ಸಂಭ್ರಮ, ಚೆಲುವು; ಲಗ್ನ: ಮುಹೂರ್ತ; ಇಭಪುರಿ: ಹಸ್ತಿನಾಪುರ; ಪುರಿ: ಊರು; ಇಭ: ಆನೆ; ಹೊರವಂಟು: ತೆರಳು; ಸುರ:ದೇವತೆ; ಸನ್ನಿಭ: ಸಮಾನವಾದ; ಬಂದ: ಆಗಮಿಸು; ಹಲವು: ಬಹಳ; ಪಯಣ: ಪ್ರಯಾಣ, ಸಂಚಾರ; ಪಟ್ಟಣ: ಊರು; ರಭಸ: ವೇಗ,ಜೋರು; ಮಿಗೆ: ಅಧಿಕ; ಇದಿರುಕೊಂಡು: ಎದುರುನೋಡಿ; ತಂದರು: ಬರೆಮಾಡಿದರು; ಸಭೆ: ಓಲಗ; ಮಾನ್ಯ: ಗೌರವ; ಉಪಚಾರ: ಸತ್ಕಾರ; ಪ್ರಭವ: ಉತ್ತಮವಾದ; ಸತ್ಕಾರ: ಸನ್ಮಾನ; ಕೇಳು: ಆಲಿಸು; ಕುಶಲ: ಕ್ಷೇಮ; ಸಂಗತಿ: ವಿಚಾರ;
ಪದವಿಂಗಡಣೆ:
ಶುಭ +ಮುಹೂರ್ತ +ವಿಳಾಸ+ಲಗ್ನದೊಳ್
ಇಭಪುರಿಯ +ಹೊರವಂಟು ಸುರ ಸ
ನ್ನಿಭನು ಬಂದನು ಹಲವು ಪಯಣದಲ್+ಇವರ +ಪಟ್ಟಣಕೆ
ರಭಸ +ಮಿಗಿಲ್+ಇದಿರ್ಗೊಂಡು +ತಂದರು
ಸಭೆಗೆ+ ಮಾನ್ಯ +ಯಥ+ಉಪಚಾರ
ಪ್ರಭವ +ಸತ್ಕಾರದಲಿ +ಕೇಳ್ದರು +ಕುಶಲ +ಸಂಗತಿಯ
ಅಚ್ಚರಿ:
(೧) ವಿದುರನನ್ನು ಸುರ ಸನ್ನಿಭ ಎಂದು ಕರೆದಿರುವುದು
(೨) ವಿದುರನಿಗೆ ಸತ್ಕಾರ ಮಾಡಿದ ರೀತಿ – ರಭಸ ಮಿಗಿಲಿದಿರ್ಗೊಂಡು ತಂದರು ಸಭೆಗೆ ಮಾನ್ಯ ಯಥೋಪಚಾರ ಪ್ರಭವ ಸತ್ಕಾರ