ಪದ್ಯ ೭೭: ವಿದುರನು ಧೃತರಾಷ್ಟ್ರನನ್ನು ಹೇಗೆ ಬಯ್ದನು?

ಹಾ ಮರುಳೆ ಕೆಣಕುವರೆ ಫಲುಗುಣ
ಭೀಮರನು ಮಿಗೆ ಹೆಚ್ಚಿ ಬೆಳೆದು
ದ್ದಾಮ ಸಿರಿಯಿದು ಹಸ್ತಿನಾಪುರವಕಟ ಕೆಡಿಸಿದೆಲ
ಕೈ ಮಗುಚದೇ ವಿಭವವಿದು ನಿ
ರ್ನಾಮರಾರೋ ಬಿತ್ತಿದರು ಕುರು
ಭೂಮಿಯಲಿ ವಿಷಬೀಜವನು ಹಾಯೆನುತ ಬಿಸುಸುಯ್ದ (ಸಭಾ ಪರ್ವ, ೧೩ ಸಂಧಿ, ೭೭ ಪದ್ಯ)

ತಾತ್ಪರ್ಯ:
ಅಯ್ಯೋ ಹುಚ್ಚ, ಪುರಾತನಕಾಲದಿಂದ ಬೆಳೆದು ಬಂದ ಮಹೋನ್ನತ ಸಂಪತ್ತಿನ ಹಸ್ತಿನಾಪುರವನ್ನು ಹಾಳುಮಾಡಿದೆ, ಭೀಮಾರ್ಜುನರನ್ನು ಕೆಣಕಬಹುದೇ? ನಿನ್ನ ವೈಭವವು ಕೈತಪ್ಪಿ ಬೀಳುವುದಿಲ್ಲವೇ? ಕುರು ಭೂಮಿಯಲ್ಲಿ ಯಾರೋ ಅನಾಮಧೇಯರು ವಿಷಬೀಜವನ್ನು ಬಿತ್ತಿದ್ದಾರೆ ಎಂದು ವಿದುರನು ನಿಟ್ಟುಸಿರಿಟ್ಟನು.

ಅರ್ಥ:
ಮರುಳು: ಬುದ್ಧಿಭ್ರಮೆ, ಹುಚ್ಚು; ಕೆಣಕು: ರೇಗಿಸು, ಪ್ರಚೋದಿಸು; ಮಿಗೆ: ಮತ್ತು, ಅಧಿಕವಾಗಿ; ಹೆಚ್ಚು: ಅಧಿಕ; ಬೆಳೆದು: ಮೂಡು, ಅಂಕುರಿಸು, ಸಮೃದ್ಧವಾಗು; ಉದ್ದಾಮ: ಶ್ರೇಷ್ಠ; ಸಿರಿ: ಐಶ್ವರ್ಯ; ಅಕಟ: ಅಯ್ಯೋ; ಕೆಡಿಸು: ಹಾಳುಮಾಡು; ಕೈ: ಹಸ್ತ; ಮಗುಚು: ಹಿಂದಿರುಗಿಸು, ಮರಳಿಸು; ವಿಭವ: ಸಿರಿ, ಸಂಪತ್ತು; ನಿರ್ನಾಮ: ನಾಶ; ಬಿತ್ತು: ಹುಟ್ಟುಹಾಕು, ಉಂಟುಮಾಡು; ಭೂಮಿ: ಅವನಿ; ವಿಷ: ಗರಲ, ನಂಜು; ಬೀಜ: ಧಾನ್ಯದ ಕಾಳು; ಹಾ: ಅಯ್ಯೋ; ಬಿಸುಸುಯ್ದ: ನಿಟ್ಟುಸಿರು;

ಪದವಿಂಗಡಣೆ:
ಹಾ +ಮರುಳೆ +ಕೆಣಕುವರೆ+ ಫಲುಗುಣ
ಭೀಮರನು +ಮಿಗೆ +ಹೆಚ್ಚಿ +ಬೆಳೆದ್
ಉದ್ಧಾಮ +ಸಿರಿ+ಇದು +ಹಸ್ತಿನಾಪುರವ್+ಅಕಟ +ಕೆಡಿಸಿದೆಲ
ಕೈ +ಮಗುಚದೇ +ವಿಭವವಿದು +ನಿ
ರ್ನಾಮರ್+ಆರೋ +ಬಿತ್ತಿದರು +ಕುರು
ಭೂಮಿಯಲಿ +ವಿಷಬೀಜವನು +ಹಾ+ಎನುತ +ಬಿಸುಸುಯ್ದ

ಅಚ್ಚರಿ:
(೧) ವಿದುರನ ಚಾಣಕ್ಷತೆ – ಆರೋ ಬಿತ್ತಿದರು ಕುರುಭೂಮಿಯಲಿ ವಿಷಬೀಜವನು
(೨) ಹಸ್ತಿನಾಪುರದ ಬಗ್ಗೆ ಒಲವು – ಬೆಳೆದುದ್ದಾಮ ಸಿರಿಯಿದು ಹಸ್ತಿನಾಪುರವ

ನಿಮ್ಮ ಟಿಪ್ಪಣಿ ಬರೆಯಿರಿ