ಪದ್ಯ ೭೧: ಧೃತರಾಷ್ಟ್ರನು ಯಾವ ನಿರ್ಧಾರಕ್ಕೆ ಬಂದನು?

ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳೆ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ (ಸಭಾ ಪರ್ವ, ೧೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಗಾಂಧಾರಿಯ ಮಾತನ್ನು ಕೇಳಿ, ಅಷ್ಟೆ ಅಲ್ಲವೇ ಆಗಿದ್ದು ಆಗಲಿ, ನನಗೆ ಬೇರೆ ಅನ್ಯ ಒಳಿತಾದ ಮಾರ್ಗ ಕಾಣುತ್ತಿಲ್ಲ, ನಿನ್ನ ಮಕ್ಕಳೇ ಹೆಚ್ಚಾಗಲಿ, ಮೆರೆಯಲಿ. ಹೆಚ್ಚು ಮಾತುಬೇಡ, ಪಾಂಡವರ ಸಭಾಸ್ಥಾನಕ್ಕೆ ಸರಿಗಟ್ಟುವ ಸಭೆಯನ್ನು ನಿರ್ಮಿಸುವ ಶಿಲ್ಪಿಗಳಾರು? ಎಂದು ಕೇಳಿ ಸಭಾ ನಿರ್ಮಾಣ ಮಾಡುವ ಶಿಲ್ಪಿಗಳನ್ನು ಕರೆಸಿದನು.

ಅರ್ಥ:
ಐಸಲೇ: ಅಲ್ಲವೇ; ಲೇಸು: ಒಳಿತು; ಕಾಣು: ತೋರು; ಮಕ್ಕಳು: ಸುತರು; ವಾಸಿ: ಭಾಗ, ಪಾಲು; ವಿಸ್ತಾರ: ವಿಶಾಲ; ಮೆರೆ: ಹೊಳೆ, ಪ್ರಕಾಶಿಸು; ಹಲವು: ಬಹಳ; ಮಾತು: ವಾಣಿ; ಸಭೆ: ಓಲಗ; ಸರಿಸದ: ಸಮಾನವಾದ; ಸಭಾ: ದರ್ಬಾರು; ವಿನ್ಯಾಸ: ರಚನೆ; ಶಿಲ್ಪಿ: ಕುಶಲಕಲೆಯನ್ನು ಬಲ್ಲವನು, ಕುಶಲ ಕರ್ಮಿ; ಧರಣೀಶ: ರಾಜ; ಕರೆಸು: ಬರೆಮಾಡು; ನಿರ್ಮಾಣ: ರಚಿಸುವ; ಕೋವಿದರು: ಪಂಡಿತರು; ಉರು: ಶ್ರೇಷ್ಠ;

ಪದವಿಂಗಡಣೆ:
ಐಸಲೇ +ತಾನ್+ಆದುದಾಗಲಿ
ಲೇಸ+ ಕಾಣೆನು +ನಿನ್ನ +ಮಕ್ಕಳೆ
ವಾಸಿಗಳ+ ವಿಸ್ತಾರ +ಮೆರೆಯಲಿ +ಹಲವು +ಮಾತೇನು
ಆ +ಸಭೆಯ +ಸರಿಸದ+ ಸಭಾ +ವಿ
ನ್ಯಾಸ+ ಶಿಲ್ಪಿಗರ್+ಆರೆನುತ +ಧರ
ಣೀಶ +ಕರೆಸಿದನ್+ಉರು +ಸಭಾ +ನಿರ್ಮಾಣ +ಕೋವಿದರ

ಅಚ್ಚರಿ:
(೧) ಧೃತರಾಷ್ಟ್ರನ ವಿವೇಕ ರಹಿತ ನಡೆ – ಆದುದಾಗಲಿ, ಲೇಸ ಕಾಣೆನು, ನಿನ್ನ ಮಕ್ಕಳೆ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು

ನಿಮ್ಮ ಟಿಪ್ಪಣಿ ಬರೆಯಿರಿ