ಪದ್ಯ ೬೯: ಧೃತರಾಷ್ಟ್ರನ ತಳಮಳಕ್ಕೆ ಕಾರಣವೇನು?

ಮುರಿವೆನೇ ಮುನಿದಿವರು ನೂರ್ವರು
ತೊರೆವರೆನ್ನನು ತೊಡಕಿಸುವೆನೇ
ತರಿದು ಬಿಸುಡುವರವರು ಕೌರವ ಶತಕವನು ಬಳಿಕ
ಹೊರಗೊಳಗೆ ಹದನಿದು ನಿಧಾನಿಸ
ಲರಿಯೆನೆನ್ನಸುವಿನಲಿ ಹೃದಯದ
ಸೆರೆ ಬಿಡದು ಶಿವಶಿವಯೆನುತ ಮರುಗಿದನು ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೯ ಪದ್ಯ)

ತಾತ್ಪರ್ಯ:
ನಾನೇನಾದರು ಕೌರವನ ವಿರುದ್ಧವಾಗಿ ನಡೆದರೆ ಇವನು ಇವರ ಸಹೋದರರ ಜೊತೆ ಸೇರಿ ನಮ್ಮನ್ನು ಬಿಟ್ಟುಬಿಡುತ್ತಾರೆ. ಅವರು ಹೇಳಿದಂತೆ ಕೇಳಿದರೆ ಮುಂದೆ ಪಾಂಡವರು ಈ ನೂರ್ವರನ್ನು ಕತ್ತರಿಸಿ ಹಾಕುತ್ತಾರೆ. ಹೀಗಿರಲು ಏನುಮಾಡಬೇಕೆಂದು ನಿರ್ಧರಿಸಲಾರೆ. ಮಕ್ಕಳ ಮೋಹ ಜೀವದಿಂದಿರುವವರೆಗೆ ಬಿಡುವುದಿಲ್ಲ, ಶಿವ ಶಿವಾ ಎಂದು ಧೃತರಾಷ್ಟ್ರನು ಮರುಗಿದನು.

ಅರ್ಥ:
ಮುರಿ: ಸೀಳು; ಮುನಿ: ಸಿಟ್ಟಾಗು, ಕೋಪಗೊಳ್ಳು; ನೂರು: ಶತ; ತೊರೆ: ಬಿಡು, ತ್ಯಜಿಸು; ತೊಡಕು: ಸಿಕ್ಕಿಕೊಳ್ಳು; ತೊಡಕಿಸು: ಸಿಕ್ಕಿಸು; ತರಿ: ಕಡಿ, ಕತ್ತರಿಸು, ಛೇದಿಸು; ಬಿಸುಡು: ಹೊರಹಾಕು, ಬಿಸಾಕು, ತ್ಯಜಿಸು; ಬಳಿಕ: ನಂತರ; ಹೊರಗೆ: ಆಚೆ; ಒಳಗೆ: ಆಂತರ್ಯ; ಹದ: ಸ್ಥಿತಿ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಅರಿ: ತಿಳಿ; ಅಸು: ಜೀವ; ಹೃದಯ: ಎದೆ; ಸೆರೆ: ಬಂಧನ; ಬಿಡು: ತ್ಯಜಿಸು; ಮರುಗು: ತಳಮಳ, ಸಂಕಟ;

ಪದವಿಂಗಡಣೆ:
ಮುರಿವೆನೇ +ಮುನಿದ್+ಇವರು +ನೂರ್ವರು
ತೊರೆವರ್+ಎನ್ನನು +ತೊಡಕಿಸುವೆನ್+
ಈತರಿದು+ ಬಿಸುಡುವರ್+ಅವರು +ಕೌರವ +ಶತಕವನು +ಬಳಿಕ
ಹೊರಗೊಳಗೆ+ ಹದನಿದು +ನಿಧಾನಿಸಲ್
ಅರಿಯೆನ್+ಎನ್+ಅಸುವಿನಲಿ +ಹೃದಯದ
ಸೆರೆ+ ಬಿಡದು +ಶಿವಶಿವಯೆನುತ+ ಮರುಗಿದನು +ಧೃತರಾಷ್ಟ್ರ

ಅಚ್ಚರಿ:
(೧) ಮಕ್ಕಳ ವ್ಯಾಮೋಹ – ಅಸುವಿನಲಿ ಹೃದಯದ ಸೆರೆ ಬಿಡದು
(೨) ನೂರು, ಶತ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ