ಪದ್ಯ ೫೮: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮ್ದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ (ಸಭಾ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ನೀನು ಪಾಂಡವರ ರಾಜ್ಯವನ್ನು ಅಪಹರಿಸಲು ಏನು ಮಾಡಬೇಕೆಂದು ನಿಶ್ಚೈಸಿರುವೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೀಯ? ಸಾಮ, ದಾನ, ಭೇದ, ದಂಡ ಈ ನಾಲ್ಕರಲ್ಲಿ ಯಾವ ಮಾರ್ಗವನ್ನು ಆರಿಸಿಕೊಂಡಿರುವೆ ಅಂಜದೆ ಹೇಳು ಎಂದು ಕೇಳಿದನು.

ಅರ್ಥ:
ನೆನೆ:ವಿಚಾರಿಸು, ಆಲೋಚಿಸು; ಮಗ: ಕುಮಾರ; ಸೂನು: ಪುತ್ರ; ರಾಜ್ಯ: ರಾಷ್ಟ್ರ; ಅಪಹಾರ: ದೋಚುವ; ಬುದ್ಧಿ: ಮನಸ್ಸು, ಚಿತ್ತ; ವಿಳಾಸ: ಯೋಜನೆ, ವಿಚಾರ; ಕಾರ್ಯ: ಕೆಲಸ; ಗತಿ: ವೇಗ; ಕಾರ್ಯಗತಿ: ಕಾರ್ಯರೂಪ; ದಾನ, ಸಾಮ, ಭೇದ, ದಂಡ: ಚತುರೋಪಾಯಗಳು; ನಿಶ್ಚೈಸು: ತೀರ್ಮಾನಿಸು; ಅಂಜು: ಹೆದರು;

ಪದವಿಂಗಡಣೆ:
ಏನ +ನೆನೆದೈ+ ಮಗನೆ +ಕುಂತೀ
ಸೂನುಗಳ +ರಾಜ್ಯ+ಅಪಹಾರದೊಳ್
ಳೇನು +ಬುದ್ಧಿ +ವಿಳಾಸವಾವುದು +ಕಾರ್ಯಗತಿ +ನಿನಗೆ
ದಾನದಲಿ +ಮೇಣ್ +ಸಾಮದಲಿ +ಭೇ
ದ+ಆನು+ಮತದಲಿ +ದಂಡದಲಿ+ ನೀ
ವೇನ+ ನಿಶ್ಚೈಸಿದಿರಿ+ ಹೇಳ್+ಇನ್+ಅಂಜಬೇಡೆಂದ

ಅಚ್ಚರಿ:
(೧) ಚತುರೋಪಾಯಗಳು – ಸಾಮ, ದಾನ, ಭೇದ, ದಂಡ

ನಿಮ್ಮ ಟಿಪ್ಪಣಿ ಬರೆಯಿರಿ