ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮ್ದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ (ಸಭಾ ಪರ್ವ, ೧೩ ಸಂಧಿ, ೫೮ ಪದ್ಯ)
ತಾತ್ಪರ್ಯ:
ಎಲೈ ದುರ್ಯೋಧನ, ನೀನು ಪಾಂಡವರ ರಾಜ್ಯವನ್ನು ಅಪಹರಿಸಲು ಏನು ಮಾಡಬೇಕೆಂದು ನಿಶ್ಚೈಸಿರುವೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೀಯ? ಸಾಮ, ದಾನ, ಭೇದ, ದಂಡ ಈ ನಾಲ್ಕರಲ್ಲಿ ಯಾವ ಮಾರ್ಗವನ್ನು ಆರಿಸಿಕೊಂಡಿರುವೆ ಅಂಜದೆ ಹೇಳು ಎಂದು ಕೇಳಿದನು.
ಅರ್ಥ:
ನೆನೆ:ವಿಚಾರಿಸು, ಆಲೋಚಿಸು; ಮಗ: ಕುಮಾರ; ಸೂನು: ಪುತ್ರ; ರಾಜ್ಯ: ರಾಷ್ಟ್ರ; ಅಪಹಾರ: ದೋಚುವ; ಬುದ್ಧಿ: ಮನಸ್ಸು, ಚಿತ್ತ; ವಿಳಾಸ: ಯೋಜನೆ, ವಿಚಾರ; ಕಾರ್ಯ: ಕೆಲಸ; ಗತಿ: ವೇಗ; ಕಾರ್ಯಗತಿ: ಕಾರ್ಯರೂಪ; ದಾನ, ಸಾಮ, ಭೇದ, ದಂಡ: ಚತುರೋಪಾಯಗಳು; ನಿಶ್ಚೈಸು: ತೀರ್ಮಾನಿಸು; ಅಂಜು: ಹೆದರು;
ಪದವಿಂಗಡಣೆ:
ಏನ +ನೆನೆದೈ+ ಮಗನೆ +ಕುಂತೀ
ಸೂನುಗಳ +ರಾಜ್ಯ+ಅಪಹಾರದೊಳ್
ಳೇನು +ಬುದ್ಧಿ +ವಿಳಾಸವಾವುದು +ಕಾರ್ಯಗತಿ +ನಿನಗೆ
ದಾನದಲಿ +ಮೇಣ್ +ಸಾಮದಲಿ +ಭೇ
ದ+ಆನು+ಮತದಲಿ +ದಂಡದಲಿ+ ನೀ
ವೇನ+ ನಿಶ್ಚೈಸಿದಿರಿ+ ಹೇಳ್+ಇನ್+ಅಂಜಬೇಡೆಂದ
ಅಚ್ಚರಿ:
(೧) ಚತುರೋಪಾಯಗಳು – ಸಾಮ, ದಾನ, ಭೇದ, ದಂಡ