ಪದ್ಯ ೫೬: ದುರ್ಯೋಧನನು ಏನು ಹೇಳಿ ಹೊರಟನು?

ಮಾತು ಸೊಗಸದಲಾ ವೃಥಾ ನೀ
ವೇತಕೆನ್ನನು ಕರೆಸಿದಿರಿ ನಿ
ಮ್ಮಾತಗಳು ಭೀಮಾರ್ಜುನರು ಸಹಿತೀ ಮಹೀತಳವ
ತಾತ ನೀವಾಳುವುದು ತಾಯೆ ಸು
ನೀತನಾ ಧರ್ಮಜನು ಧರ್ಮ ವಿ
ಘಾತಕರು ನಾವೆಮ್ಮ ಕಳುಹುವುದೆನುತ ಹೊರವಂಟ (ಸಭಾ ಪರ್ವ, ೧೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆ ತಾಯಿಯನ್ನು ಭಾವುಕವಾಗಿ ತನ್ನ ಬಳಿ ಸಳೆಯಲು ತನ್ನ ಮಾತನ್ನು ಮುಂದುವರಿಸುತ್ತಾ, ನನ್ನ ಮಾತು ನಿಮಗೆ ಹಿತವೆನಿಸುತ್ತಿಲ್ಲ, ನನ್ನನ್ನೇಕೆ ಸುಮ್ಮನೆ ಇಲ್ಲಿಗೆ ಕರೆಸಿದಿರಿ? ಅಪ್ಪ, ನಿಮ್ಮವರಾದ ಭೀಮಾರ್ಜುನರೊಡನೆ ಈ ಭೂಮಿಯನ್ನು ನೀವೇ ಆಳಿರಿ, ಅಮ್ಮಾ, ಧರ್ಮಜನು ನ್ಯಾಯಮಾರ್ಗದಲ್ಲಿ ಸುಶಿಕ್ಷಿತನು, ನಿಮ್ಮ ಮಕ್ಕಳಾದ ನಾವು ಅಧರ್ಮದವರು, ಧರ್ಮದಿಂದ ದೂರವುಳಿದವರು, ಅವರೊಂದಿಗೆ ನೀವು ಈ ಭೂಮಿಯನ್ನು ಆಳಿರಿ, ನಮಗೆ ತೆರಳಲು ಅಪ್ಪಣೆ ನೀಡಿ ಎಂದು ಹೇಳಿ ತೆರಳಿದನು.

ಅರ್ಥ:
ಮಾತು: ವಾಣಿ; ಸೊಗಸು: ಚೆಂದ; ವೃಥ: ಸುಮ್ಮನೆ; ಕರೆಸು: ಬರೆಮಾಡು; ಸಹಿತ: ಜೊತೆ; ಮಹೀತಳ: ಭೂಮಿ; ತಾತ: ತಂದೆ; ಆಳು: ಅಧಿಕಾರ ನಡೆಸು; ತಾಯಿ: ಮಾತೆ; ಸುನೀತ: ಒಳ್ಳೆಯ ನಡತೆ; ವಿಘಾತ: ಕೇಡು, ಹಾನಿ; ಕಳುಹು: ಕಳಿಸು, ಬೀಳ್ಕೊಡು; ಹೊರವಂಟ: ತೆರಳು;

ಪದವಿಂಗಡಣೆ:
ಮಾತು+ ಸೊಗಸದಲಾ+ ವೃಥಾ +ನೀ
ವೇತಕ್+ಎನ್ನನು +ಕರೆಸಿದಿರಿ+ ನಿ
ಮ್ಮಾತಗಳು+ ಭೀಮಾರ್ಜುನರು +ಸಹಿತೀ +ಮಹೀತಳವ
ತಾತ +ನೀವಾಳುವುದು +ತಾಯೆ +ಸು
ನೀತನ್+ಆ+ಧರ್ಮಜನು +ಧರ್ಮ +ವಿ
ಘಾತಕರು +ನಾವೆಮ್ಮ +ಕಳುಹುವುದ್+ಎನುತ +ಹೊರವಂಟ

ನಿಮ್ಮ ಟಿಪ್ಪಣಿ ಬರೆಯಿರಿ