ಪದ್ಯ ೫೩: ದುರ್ಯೋಧನನು ತನ್ನ ಕೀರ್ತಿಯನ್ನು ಹೇಗೆ ಉಳಿಸಿಕೊಳ್ಳುತ್ತೇನೆಂದನು?

ಆಯ ಛಲವಭಿಮಾನ ಹೋಗಲಿ
ಕಾಯ ಬೇಕೆಂಬರೆ ನೃಪಾಲರ
ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ
ಆಯ ಛಲವಾಚಂದ್ರ ತಾರಕ
ಕಾಯವಧ್ರುವವೆಂಬಡಿದಕೆ ಸ
ಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ (ಸಭಾ ಪರ್ವ, ೧೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಮ್ಮ ರಾಜ್ಯ, ನಮ್ಮ ಛಲ, ಸ್ವಾಭಿಮಾನಗಳು ಬೇಡವೇ ಬೇಡ. ಅವಉ ಎಲ್ಲಿಗಾದರೂ ಹೋಗಲಿ; ಬೆಂದು ಹೋದ ನಮ್ಮ ಹೊಟ್ಟೆಗಳನ್ನು ಪರರಾಜರ ಬಾಯ ತಂಬುಲವನ್ನು ತಿಂದಾದರೂ ಬದುಕುತ್ತೇವೆ. ರಾಜ್ಯ, ಛಲ, ಸ್ವಾಭಿಮಾನಗಳು ಶಾಶ್ವತ, ದೇಹವು ನಶ್ವರ ಎಂದು ನೀವು ಹೇಳುವುದಾದರೆ, ಈ ದೇಹಗಳನ್ನು ಕಠೋರ ಕಾಲಕೂಟ ವಿಷದ ನದಿಗೆ ಕೊಟ್ಟು ನಮ್ಮ ಕೀರ್ತಿಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದನು.

ಅರ್ಥ:
ಆಯ: ರೀತಿ, ಉದ್ದೇಶ; ಛಲ: ನೆಪ, ವ್ಯಾಜ; ಅಭಿಮಾನ: ಹೆಮ್ಮೆ, ಅಹಂಕಾರ; ಹೋಗು: ತೆರಳು; ಕಾಯ: ದೇಹ; ನೃಪಾಲ: ರಾಜ; ಬಾಯ: ಬಾಯಿ, ಮುಖದ ಅಂಗ; ತಂಬುಲ: ಅಗಿದು ಉಗುಳುವ ಕವಳ, ತಾಂಬೂಲ; ಹೊರೆ: ಭಾರ; ಬೆಂದ: ಪಕ್ವವಾದ; ಬಸುರು: ಹೊಟ್ಟೆ; ಆಚಂದ್ರ: ಯಾವಾಗಲು; ತಾರಕ: ರಕ್ಷಕ, ಅಂಬಿಗ; ಅಧ್ರುವ: ಸ್ಥಿರವಲ್ಲದ; ಸಹಾಯ: ನೆರವು; ಕಾಲಕೂಟ: ವಿಷ; ಕಠೋರ: ಭೀಕರ; ನದಿ: ಸರೋವರ;

ಪದವಿಂಗಡಣೆ:
ಆಯ+ ಛಲವ್+ಅಭಿಮಾನ +ಹೋಗಲಿ
ಕಾಯ +ಬೇಕೆಂಬರೆ+ ನೃಪಾಲರ
ಬಾಯ+ ತಂಬುಲ+ ತಿಂದು +ಹೊರೆವೆವು+ ಬೆಂದ +ಬಸುರುಗಳ
ಆಯ+ ಛಲವ್+ಆಚಂದ್ರ +ತಾರಕ
ಕಾಯವ್+ಅಧ್ರುವವ್+ಎಂಬಡಿದಕೆ+ ಸ
ಹಾಯವಿದೆಲಾ+ ಕಾಲಕೂಟ+ ಕಠೋರ +ನದಿಯೆಂದ

ಅಚ್ಚರಿ:
(೧) ಸ್ವಾಭಿಮಾನದ ನುಡಿ – ನೃಪಾಲರ ಬಾಯ ತಂಬುಲ ತಿಂದು ಹೊರೆವೆವು ಬೆಂದ ಬಸುರುಗಳ; ಕಾಯವಧ್ರುವವೆಂಬಡಿದಕೆ ಸಹಾಯವಿದೆಲಾ ಕಾಲಕೂಟ ಕಠೋರ ನದಿಯೆಂದ

ನಿಮ್ಮ ಟಿಪ್ಪಣಿ ಬರೆಯಿರಿ