ಪದ್ಯ ೪೪: ದುರ್ಯೋಧನನು ಹೇಗೆ ಸಾಯುತ್ತೇನೆಂದು ಹೇಳಿದನು?

ಸಿಂಗಿಯನು ಬಿತ್ತಿದೆನು ಪಾಂಡವ
ರಂಗದಲಿ ತತ್ಫಲದ ಬೆಳಸಿನ
ಸಿಂಗಿಯಲಿ ತಾ ಸಾವೆನಲ್ಲದೊಡಗ್ನಿ ಕುಂಡದಲಿ
ಭಂಗಿಸುವೆನಾ ಫಲದೊಳೆನ್ನನು
ನುಂಗಬೇಹುದು ವಹ್ನಿ ಮೇಣೀ
ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ (ಸಭಾ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ನಾನು ಪಾಂಡವರಿಗೆ ಘೋರವಾದ ವಿಷವನ್ನುಣಿಸಿದೆನು. ಅದರ ಫಲವು ಹಿರಿದಾಗಿ ಬೆಳೆದು ಆ ವಿಷದಿಂದಲೇ ನಾನು ಸಾಯುತ್ತೇನೆ. ಇಲ್ಲದಿದ್ದರೆ ಬೆಂಕಿಯ ಕುಂಡದಲ್ಲೋ ನೀರಿನಲ್ಲಿ ಬಿದ್ದೋ ಈ ದೇಹವನ್ನು ಬಿಡುತ್ತೇನೆ ಎಂದು ತನ್ನ ನೋವನ್ನು ತೋಡಿಕೊಂಡನು.

ಅರ್ಥ:
ಸಿಂಗಿ: ಒಂದು ಬಗೆಯ ಘೋರ ವಿಷ; ಬಿತ್ತು: ಉಂಟುಮಾಡು, ಪ್ರಚಾರ ಮಾಡು; ರಂಗ: ವೇದಿಕೆ; ಫಲ: ಪ್ರಯೋಜನ; ಬೆಳಸು: ವಿಕಸನಗೊಳ್ಳು; ಸಾವು: ಮರಣ; ಅಗ್ನಿ: ಬೆಂಕಿ; ಕುಂಡ: ಗುಣಿ, ಹೋಮದ ಗುಳಿ; ಭಂಗಿಸು: ಅಪಮಾನ ಮಾಡು, ನಾಶಮಾಡು, ಸೋಲಿಸು; ಫಲ: ಪ್ರಯೋಜನ; ನುಂಗು: ಸ್ವಾಹ ಮಾಡು; ವಹ್ನಿ: ಅಗ್ನಿ; ಮೇಣ್; ಅಥವ; ಗಂಗೆ: ನೀರು; ಬಿದ್ದು: ಬೀಳು; ನೀಗು: ಬಿಡು, ತೊರೆ, ತ್ಯಜಿಸು; ಬಿಸುಸುಯ್ದ: ನಿಟ್ಟುಸಿರು ಬಿಡು;

ಪದವಿಂಗಡಣೆ:
ಸಿಂಗಿಯನು +ಬಿತ್ತಿದೆನು +ಪಾಂಡವ
ರಂಗದಲಿ +ತತ್ಫಲದ +ಬೆಳಸಿನ
ಸಿಂಗಿಯಲಿ +ತಾ +ಸಾವೆನಲ್ಲದೊಡ್+ಅಗ್ನಿ +ಕುಂಡದಲಿ
ಭಂಗಿಸುವೆನಾ +ಫಲದೊಳ್+ಎನ್ನನು
ನುಂಗಬೇಹುದು +ವಹ್ನಿ +ಮೇಣ್
ಈ+ಗಂಗೆಯಲಿ +ಬಿದ್+ಒಡಲ +ನೀಗುವೆನ್+ಎನುತ +ಬಿಸುಸುಯ್ದ

ಅಚ್ಚರಿ:
(೧) ಸಾಯುವೆನು ಎನ್ನುವ ಪರಿ – ಭಂಗಿಸುವೆನಾ ಫಲದೊಳೆನ್ನನು ನುಂಗಬೇಹುದು ವಹ್ನಿ ಮೇಣೀ ಗಂಗೆಯಲಿ ಬಿದ್ದೊಡಲ ನೀಗುವೆನೆನುತ ಬಿಸುಸುಯ್ದ

ನಿಮ್ಮ ಟಿಪ್ಪಣಿ ಬರೆಯಿರಿ