ಪದ್ಯ ೩೪: ಯಾವುದು ದುರ್ಯೋಧನನ ಮನಸ್ಸನ್ನು ನಾಶಮಾಡಿತು?

ಹೊಕ್ಕ ಸಾಲಲಿ ಹೊಳೆವ ಮಣಿರುಚಿ
ಮುಕ್ಕುಳಿಸಿದವು ಕಂಗಳನು ನಡೆ
ದಿಕ್ಕೆಲನ ನೋಡಿದರೆ ಮುರಿದೊಳಸರಿದವಾಲಿಗಳು
ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ
ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು (ಸಭಾ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಆ ಆಲಯದಲ್ಲಿ ಒಂದು ಕಡೆ ಮನಿಗಳ ಸಾಲು ಕಣ್ನನ್ನು ಕುಕ್ಕುತ್ತಿದ್ದವು, ಒಳಕ್ಕೆ ಹೋಗಿ ನೋಡಿದರೆ ಕಣ್ಣುಗುಡ್ಡೆಗಳು ಒಳಕ್ಕೆ ಸರಿದಂತಾಯಿತು. ನಿರ್ಮಲವಾದ ರತ್ನಗಳ ಕಾಂತಿಯಿಂದ ಮನಸ್ಸು ಮೋಹಿಸಿ ದಾರಿತಪ್ಪಿತು. ಅನೇಕ ವಿಧವಾದ ರತ್ನಗಳ ಕಾಂತಿಯು ವಿವೇಕವನ್ನು ನಾಶಮಾಡಿತು ಎಂದು ದುರ್ಯೋಧನನು ವಿವರಿಸಿದನು.

ಅರ್ಥ:
ಹೊಕ್ಕು: ಸೇರಿ; ಸಾಲು: ಆವಳಿ; ಹೊಳೆ: ಪ್ರಕಾಶಿಸು; ಮಣಿ: ಬೆಲೆಬಾಳುವ ರತ್ನ; ಮುಕ್ಕುಳಿಸು: ಹೊರಹಾಕು; ಕಂಗಳು: ಕಣ್ಣು; ನಡೆ: ಚಲಿಸು; ದಿಕ್ಕು: ದಿಶೆ; ನೋಡು: ವೀಕ್ಷಿಸು; ಮುರಿ: ಸೀಳು; ಆಲಿ: ಕಣ್ಣು; ಸರಿ: ಪಕ್ಕಕ್ಕೆ ಹೋಗು; ಉಕ್ಕು: ಹೆಚ್ಚು, ಹೊರಹೊಮ್ಮು; ಅಮಲ: ಸ್ವಚ್ಛ, ನಿರ್ಮಲ; ಚ್ಛವಿ: ಕಾಂತಿ; ಮನ: ಮನಸ್ಸು; ಸಿಕ್ಕಿ: ಬಂಧನ; ಹೊಲಬಳಿ: ದಾರಿ ಕೆಡು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಡೊಕ್ಕರಿಸು: ಗುದ್ದು, ನಾಶಮಾಡು; ಕೆಡಹು: ನಾಶಮಾದು; ಬಹುವಿಧ; ಹಲವಾರು ಬಗೆ; ರತ್ನ: ಮಣಿ; ಕಾಂತಿ: ಪ್ರಕಾಶ;

ಪದವಿಂಗಡಣೆ:
ಹೊಕ್ಕ+ ಸಾಲಲಿ +ಹೊಳೆವ +ಮಣಿರುಚಿ
ಮುಕ್ಕುಳಿಸಿದವು+ ಕಂಗಳನು+ ನಡೆ
ದಿಕ್ಕೆಲನ +ನೋಡಿದರೆ +ಮುರಿದೊಳ+ಸರಿದವ್+ಆಲಿಗಳು
ಉಕ್ಕುವ್+ಅಮಲಚ್ಛವಿಗಳಲಿ+ ಮನ
ಸಿಕ್ಕಿ+ ಹೊಲಬಳಿದುದು +ವಿವೇಕವ
ಡೊಕ್ಕರಿಸಿ+ ಕೆಡಹಿದವು +ಬಹುವಿಧ +ರತ್ನ+ಕಾಂತಿಗಳು

ಅಚ್ಚರಿ:
(೧) ಆಲಿ, ಕಂಗಳು – ಸಮನಾರ್ಥಕ ಪದ
(೨) ಮನಸ್ಸು ಚಂಚಲವಾದುದನ್ನು ಹೇಳುವ ಪರಿ – ಉಕ್ಕುವಮಲಚ್ಛವಿಗಳಲಿ ಮನ
ಸಿಕ್ಕಿ ಹೊಲಬಳಿದುದು ವಿವೇಕವ ಡೊಕ್ಕರಿಸಿ ಕೆಡಹಿದವು ಬಹುವಿಧ ರತ್ನಕಾಂತಿಗಳು
(೩) ಮಣಿರುಚಿ – ರುಚಿ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ