ಪದ್ಯ ೩೧: ಧರ್ಮಜನ ಓಲಗವನ್ನು ಯಾರು ನಿರ್ಮಿಸಿದರು?

ಇದಕೆ ಕಾರಣವೇನು ಹಣೆ ನೊಂ
ದುದಕದೇನು ನಿಮಿತ್ತವೆನಲಾ
ಸದನದಲಿ ಮಯನಿತ್ತ ಸಭೆಯನು ದೇವರರಿಯರಲೆ
ಮುದದಿನಾ ಧರ್ಮಜನು ಘನ ಸಂ
ಪದದಲೋಲಗವಿತ್ತನಾ ದ್ರೌ
ಪದಿ ನಿಜಾನುಜ ಮಂತ್ರಿ ಸಚಿವ ಪಸಾಯಿತರು ಸಹಿತ (ಸಭಾ ಪರ್ವ, ೧೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಮಗನ ದುಃಖವನ್ನು ಕೇಳಿದ ಧೃತರಾಷ್ಟ್ರ, ಮಗನೇ ಇದಕ್ಕೆಲ್ಲಾ ಕಾರಣವೇನು, ನಿನ್ನ ಹಣೆಗೆ ಪೆಟ್ಟು ಹೇಗೆ ಬಿದ್ದಿತು ಎಂದು ಕೇಳಲು, ದುರ್ಯೋಧನನು, ಅಪ್ಪ, ಪಾಂಡವರಿಗೆ ಮಯನು ಸಭಾಸ್ಥಾನವನ್ನು ನಿರ್ಮಿಸಿಕೊಟ್ಟಿದ್ದು ನಿಮಗೆ ಗೊತ್ತಿದೆಯಲ್ಲವೇ? ಧರ್ಮರಾಯನು ತನ್ನ ತಮ್ಮಂದಿರು, ದ್ರೌಪದಿ, ಮಂತ್ರಿ, ಸಚಿವ, ಸಾಮಂತರಾಜರು ಮತ್ತಿತರ ಆಪ್ತರೊಡನೆ ಅಲ್ಲಿ ಮಹಾವೈಭವದಿಂದ ಓಲಗದಲ್ಲಿದ್ದನು ಎಂದು ದುರ್ಯೋಧನನು ಹೇಳಿದನು.

ಅರ್ಥ:
ಕಾರಣ: ನಿಮಿತ್ತ, ಹೇತು; ಹಣೆ: ಲಲಾಟ; ನೊಂದು: ಪೆಟ್ಟು ನಿಮಿತ್ತ: ಕಾರಣ; ಸದನ: ನಿವಾಸ; ಸಭೆ: ಓಲಗ; ದೇವ: ಸುರರು, ಭಗವಂತ; ಮುದ: ಸಂತಸ; ಘನ: ಶ್ರೇಷ್ಠ; ಸಂಪದ: ಐಶ್ವರ್ಯ, ಸಂಪತ್ತು; ಓಲಗ: ದರ್ಬಾರು; ಅನುಜ: ತಮ್ಮ; ಮಂತ್ರಿ: ಸಚಿವ; ಪಸಾಯಿತ: ಸಾಮಂತರಾಜ; ಸಹಿತ: ಜೊತೆ;

ಪದವಿಂಗಡಣೆ:
ಇದಕೆ+ ಕಾರಣವೇನು+ ಹಣೆ +ನೊಂ
ದುದಕ್+ಅದೇನು +ನಿಮಿತ್ತವ್+ಎನಲ್+ಆ
ಸದನದಲಿ +ಮಯನ್+ಇತ್ತ +ಸಭೆಯನು +ದೇವರ್+ಅರಿಯರಲೆ
ಮುದದಿನ್+ಆ+ ಧರ್ಮಜನು+ ಘನ+ ಸಂ
ಪದದಲ್+ಓಲಗವ್+ಇತ್ತನಾ +ದ್ರೌ
ಪದಿ +ನಿಜಾನುಜ+ ಮಂತ್ರಿ +ಸಚಿವ +ಪಸಾಯಿತರು+ ಸಹಿತ

ಅಚ್ಚರಿ:
(೧) ಮುದ, ಸಂಪದ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ