ಪದ್ಯ ೨೯: ದುರ್ಯೋಧನನು ಮುಂದೆ ಹೇಗೆ ಬಾಳುವೆನೆಂದು ದುಃಖವನ್ನು ತೋಡಿಕೊಂಡನು?

ಏನನೆಂಬೆನು ಬೊಪ್ಪ ಕುಂತೀ
ಸೂನುಗಳ ಸಾಮರ್ಥ್ಯ ಪಣವನು
ದಾನವಾರಿಯ ಹಾಸುಹೊಕ್ಕಿನ ಸೌಖ್ಯ ಸಂಗತಿಯ
ತಾ ನಪುಂಸಕನಾದ ಪರಿಯನ
ದೇನ ವಿಸ್ತರಿಸುವೆನು ಲಜ್ಜಾ
ಮಾನಿನಿಗೆ ತನ್ನೊಕ್ಕತನ ವಿಂದಿಳಿದು ಹೋಯ್ತೆಂದ (ಸಭಾ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಂದೆ, ನಾನು ಪಾಂಡವರ ಸಾಮರ್ಥ್ಯದ ಹೆಚ್ಚಳವನ್ನು ಏನೆಂದು ಹೇಳಲಿ, ಕೃಷ್ಣನಿಗೂ ಅವರಿಗೂ ಬಿಗಿಯಾದ ಹೊಂದಾಣಿಕೆ ಇದೆ, ಅದರಿಂದಾಗಿರುವ ಸಂತೋಷಗಳನ್ನು ಏನೆಂದು ಹೇಳಲಿ, ಅವರೆದುರಿನಲ್ಲಿ ನಾನು ನಪುಂಸಕನಾಗಿ ಲಜ್ಜೆ ಎಂಬ ಹೆಣ್ಣಿನೊಡನೆ ನಾನು ನಾಚಿಕೆಗೀಡಾಗಿ ಬಾಳುವಂತಾಯಿತು, ನನ್ನ ಯೋಗ್ಯತೆ ಕುಂದಿದಂತಾಗಿದೆ ಎಂದನು.

ಅರ್ಥ:
ಎಂಬೆನು: ಹೇಳುವೆನು; ಬೊಪ್ಪ: ತಂದೆ; ಸೂನು: ಮಕ್ಕಳು; ಸಾಮರ್ಥ್ಯ: ಪೌರುಷ; ಪಣ: ಪಂದ್ಯ; ದಾನವಾರಿ: ರಾಕ್ಷಸರ ವೈರಿ (ಕೃಷ್ಣ); ಹಾಸುಹೊಕ್ಕು: ಬಿಗಿಯಾದ ಹೊಂದಿಕೆ; ಸೌಖ್ಯ: ಸುಖ, ನೆಮ್ಮದಿ; ಸಂಗತಿ: ಸಹವಾಸ, ಒಡನಾಟ; ನಪುಂಸಕ: ನಿರ್ವೀರ್ಯನಾದವನು, ಷಂಡ; ಪರಿ: ರೀತಿ; ವಿಸ್ತರಿಸು: ವಿಸ್ತಾರವಾಗಿ ಹೇಳು; ಲಜ್ಜೆ:ನಾಚಿಕೆ; ಮಾನಿನಿ: ಹೆಣ್ಣು; ಒಕ್ಕತನ: ಸಂಸಾರ; ಇಳಿ: ಕೆಳಕ್ಕೆ ಹೋಗು;

ಪದವಿಂಗಡಣೆ:
ಏನನೆಂಬೆನು +ಬೊಪ್ಪ +ಕುಂತೀ
ಸೂನುಗಳ+ ಸಾಮರ್ಥ್ಯ +ಪಣವನು
ದಾನವಾರಿಯ +ಹಾಸುಹೊಕ್ಕಿನ+ ಸೌಖ್ಯ +ಸಂಗತಿಯ
ತಾ +ನಪುಂಸಕನಾದ+ ಪರಿಯನದ್
ಏನ +ವಿಸ್ತರಿಸುವೆನು+ ಲಜ್ಜಾ
ಮಾನಿನಿಗೆ+ ತನ್ನೊಕ್ಕತನವ್ + ಇಂದಿಳಿದು +ಹೋಯ್ತೆಂದ

ಅಚ್ಚರಿ:
(೧) ಲಜ್ಜೆ ಎಂಬ ಹೆಣ್ಣೊಡನೆ ಬಾಳುವಂತಾಗಿದೆ ಎಂಬ ದೃಷ್ಟಾಂತ – ಲಜ್ಜಾ
ಮಾನಿನಿಗೆ ತನ್ನೊಕ್ಕತನ ವಿಂದಿಳಿದು ಹೋಯ್ತೆಂದ

ನಿಮ್ಮ ಟಿಪ್ಪಣಿ ಬರೆಯಿರಿ