ಪದ್ಯ ೨೭: ದುರ್ಯೋಧನನು ತನ್ನನ್ನು ತಾನೆ ಹೇಗೆ ನಿಂದಿಸಿಕೊಂಡನು?

ಮುನಿಚರಿತ್ರರು ನೀವು ರಾಜಸ
ತನದ ಮದದಲಿ ಲೋಕಯಾತ್ರೆಯ
ನನುಸರಿಸುವವರಾವು ನೀವೇ ಭೋಗನಿಸ್ಪೃಹರು
ಅನುದಿವಸ ರಾಗಿಗಳು ನಾವೆ
ಮ್ಮನುಮತವ ಪಾಲಿಸುವರಾರೆಂ
ದೆನುತ ಸುಯ್ದನು ಮರುಗಿ ಬೈದನು ತನ್ನ ದುಷ್ಕೃತವ (ಸಭಾ ಪರ್ವ, ೧೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೀವು ಋಷಿಗಳಂತೆ ನಡೆಯುವವರು, ನನ್ನ ಮನಸ್ಸಿನಲ್ಲೋ ರಾಜಸ ತುಂಬಿದೆ. ನನ್ನ ನಡತೆಯೂ ರಾಜಸ. ಲೋಕದಂತೆ ನಡೆಯುವ ಸಾಮಾನ್ಯನು ನಾನು, ನಿಮಗಾದರೋ ಭೋಗವೇ ಬೇಕಾಗಿಲ್ಲ. ನಾನಾದರೋ ಅನುದಿನವೂ ಹಲವು ರಾಗಗಳಿಗೆ ಒಳಗಾಗುವವನು. ಇದೆಲ್ಲಾ ನನ್ನ ದುಷ್ಕರ್ಮದ ಫಲ. ನನ್ನ ಮಾತನ್ನು ಕೇಳುವವರಾದರೂ ಯಾರು ಎನ್ನುತ್ತಾ ದುರ್ಯೋಧನನು ನಿಟ್ಟುಸಿರು ಬಿಟ್ಟನು.

ಅರ್ಥ:
ಮುನಿ: ಋಷಿ; ಚರಿತ್ರ: ಇತಿಹಾಸ; ರಾಜಸ: ಕಾಮ ಕ್ರೋಧಗಳಿಂದ ಕೂಡಿದ ಗುಣ, ರಜೋಗುಣ; ಮದ: ಅಹಂಕಾರ; ಲೋಕ: ಜಗತ್ತು; ಯಾತ್ರೆ: ಪ್ರಯಾಣ; ಅನುಸರಿಸು: ಕೂಡಿಸು; ಹಿಂಬಾಲಿಸು; ಭೋಗ: ಸುಖವನ್ನು ಅನುಭವಿಸುವುದು; ನಿಸ್ಪೃಹ: ಆಸೆ ಇಲ್ಲದವ; ಅನುದಿವಸ: ಪ್ರತಿನಿತ್ಯ; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ಅನುಮತ: ಒಪ್ಪಿಗೆ; ಪಾಲಿಸು: ರಕ್ಷಿಸು, ಕಾಪಾಡು; ಸುಯ್ದನು: ನಿಟ್ಟುಸಿರು; ಮರುಗು: ತಳಮಳ, ಸಂಕಟ; ಬೈದನು: ಜರಿದನು; ದುಷ್ಕೃತ: ಕೆಟ್ಟ ಕೆಲಸ;

ಪದವಿಂಗಡಣೆ:
ಮುನಿಚರಿತ್ರರು+ ನೀವು +ರಾಜಸ
ತನದ +ಮದದಲಿ+ ಲೋಕ+ಯಾತ್ರೆಯನ್
ಅನುಸರಿಸುವವರ್+ಆವು +ನೀವೇ +ಭೋಗ+ನಿಸ್ಪೃಹರು
ಅನುದಿವಸ+ ರಾಗಿಗಳು +ನಾವ್+ಎಮ್ಮ್
ಅನುಮತವ+ ಪಾಲಿಸುವರಾರ್
ಎಂದೆನುತ+ ಸುಯ್ದನು +ಮರುಗಿ +ಬೈದನು +ತನ್ನ +ದುಷ್ಕೃತವ

ಅಚ್ಚರಿ:
(೧) ತಂದೆಯನ್ನು ಸಜ್ಜನ ಎನ್ನುವ ಪರಿ – ಮುನಿಚರಿತ್ರರು ನೀವು
(೨) ಅನುಸರಿಸು, ಅನುದಿವಸ, ಅನುಮತ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ