ಪದ್ಯ ೨೫: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ದುಗುಡವೇಕೈ ಮಗನೆ ಹಿರಿಯೋ
ಲಗವನೀಯೆ ಗಡೇಕೆ ವೈಹಾ
ಳಿಗಳ ಬೇಟೆಗಳವನಿಪಾಲ ವಿನೋದ ಕೇಳಿಗಳ
ಬಗೆಯೆ ಗಡ ಬಾಂಧವರ ಸಚಿವರ
ಹೊಗಿಸೆ ಗಡ ನಿನ್ನರಮನೆಯ ನೀ
ಹಗಲು ನಿನಗೇಕಾಯ್ತು ಕತ್ತಲೆಯೆಂದನಂಧನೃಪ (ಸಭಾ ಪರ್ವ, ೧೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಗನನ್ನು ಅಪ್ಪಿ ಮನಗೇ ನಿನಗಾವ ದುಃಖ ಬಂದೊದಗಿದೆ? ಆಸ್ಥಾನಕ್ಕೇಕೆ ಹೋಗುತ್ತಿಲ್ಲ? ಆನೆ ಕುದುರೆಗಳ ಸವಾರಿ, ಬೇಟೆ ಮತ್ತಿತರ ರಾಜಯೋಗ್ಯ ವಿನೋದಗಳನ್ನೇಕೆ ಲೆಕ್ಕಕ್ಕೆ ತಂದುಕೊಳ್ಳುತ್ತಿಲ್ಲ? ಮಂತ್ರಿಗಳನ್ನೂ ಬಾಂಧವರನ್ನೂ ನಿನ್ನ ಅರಮನೆಗೇಕೆ ಹೊಗಿಸುತ್ತಿಲ್ಲ. ಹಗಲು ನಿನಗೇಕೆ ರಾತ್ರಿಯ ಕತ್ತಲಾಯಿತು ಎಂದು ದುರ್ಯೋಧನನನ್ನು ಧೃತರಾಷ್ಟ್ರನು ಕೇಳಿದನು.

ಅರ್ಥ:
ದುಗುಡ: ದುಃಖ; ಮಗ: ಪುತ್ರ, ಸುತ; ಹಿರಿ: ದೊಡ್ಡ; ಓಲಗ: ದರ್ಬಾರು; ಗಡ: ಬೇಗನೆ, ಅಲ್ಲವೆ; ವೈಹಾಳಿ: ಕುದುರೆ ಸವಾರಿ, ಸಂಚಾರ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ಅವನಿಪಾಲ: ರಾಜ; ವಿನೋದ: ಹಾಸ್ಯ, ತಮಾಷೆ; ಕೇಳಿ: ಕ್ರೀಡೆ, ವಿನೋದ; ಬಗೆ: ಜಾತಿ, ಲಕ್ಷಿಸು; ಬಾಂಧವರು: ಸಂಬಂಧಿಕರು; ಸಚಿವ: ಮಂತ್ರಿ; ಹೊಗಿಸು: ಹೊಗುವಂತೆ ಮಾಡು; ಅರಮನೆ: ಆಲಯ; ಹಗಲು: ದಿನ, ದಿವಸ; ಕತ್ತಲೆ: ಅಂಧಕಾರ; ಅಂಧನೃಪ: ಕಣ್ಣಿಲ್ಲದ ರಾಜ (ಧೃತರಾಷ್ಟ್ರ);

ಪದವಿಂಗಡಣೆ:
ದುಗುಡವ್+ಏಕೈ+ ಮಗನೆ+ ಹಿರಿ+
ಓಲಗವನೀಯೆಗಡ್+ಏಕೆ+ ವೈಹಾ
ಳಿಗಳ +ಬೇಟೆಗಳ್+ಅವನಿಪಾಲ+ ವಿನೋದ +ಕೇಳಿಗಳ
ಬಗೆಯೆ+ ಗಡ +ಬಾಂಧವರ +ಸಚಿವರ
ಹೊಗಿಸೆ +ಗಡ+ ನಿನ್ನ್+ಅರಮನೆಯ +ನೀ
ಹಗಲು+ ನಿನಗೇಕಾಯ್ತು +ಕತ್ತಲೆ+ಎಂದನ್+ಅಂಧನೃಪ

ಅಚ್ಚರಿ:
(೧) ಕತ್ತಲೆ ಅಂಧನೃಪ – ಕತ್ತಲೆ ಅಂಧ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ