ಪದ್ಯ ೯: ಕೌರವನು ಯಾರನ್ನು ಬರಹೇಳೆಂದು ಅಪ್ಪಣೆಯಿಟ್ಟನು?

ಕರೆದು ಬಾಗಿಲವರಿಗೆ ತನ್ನಯ
ಬರವನರುಹಿಸಲವರು ರಾಯನ
ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
ಅರಸ ಬಿನ್ನಹ ಮಾವದೇವರು
ದರುಶನಾರ್ಥಿಗಳೆನಲು ಮನದಲಿ
ಕುರುನೃಪತಿ ಚಿಂತಿಸುತ ಬರಹೇಳೆಂದು ನೇಮಿಸಿದ (ಸಭಾ ಪರ್ವ, ೧೩ ಸಂಧಿ, ೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಅರಮನೆಯ ಬಾಗಿಲನ್ನು ಕಾಯುತ್ತಿದ್ದ ಸೇವಕರನ್ನು ಕರೆದು ರಾಜನಿಗೆ ನಾನು (ಶಕುನಿ) ಬಂದಿರುವುದೆಂದು ತಿಳಿಸಲು ಶಕುನಿ ಹೇಳಿದನು. ದೂತರು ದುರ್ಯೋಧನನ ಬಳಿಗೆ ಬಂದು ಬಾಯಲ್ಲಿ ಅಂಗೈಯನ್ನಿಟ್ಟು, ಎಲೈ ರಾಜನೇ ನಿಮ್ಮ ಮಾವನವರು ನಿಮ್ಮನ್ನು ಕಾಣಲು ಬಂದಿದ್ದಾರೆ ಎಂದು ತಿಳಿಸಲು, ಚಿಂತಾಗ್ರಸ್ಥನಾಗಿದ್ದ ದುರ್ಯೋಧನನು ಅವರನ್ನು ಬರಹೇಳು ಎಂದು ಅಪ್ಪಣೆ ನೀಡಿದನು.

ಅರ್ಥ:
ಕರೆ: ಬರೆಮಾಡು; ಬಾಗಿಲು: ಕದ; ಬರವು: ಆಗಮನ; ಅರುಹು: ತಿಳಿಸು, ಹೇಳು; ರಾಯ: ರಾಜ; ಹೊರೆ: ಆಶ್ರಯ; ಬಂದು: ಆಗಮಿಸು; ನುಡಿ: ಹೇಳು, ಮಾತಾದು; ಅಂಗೈ: ಹಸ್ತ; ತಳದ: ಕೆಳಗು; ಬಾಯ್: ಮುಖದ ಒಂದು ಅಂಗ; ಅರಸ: ರಾಜ; ಬಿನ್ನಹ: ಕೋರಿಕೆ; ಮಾವ: ತಾಯಿಯ ತಮ್ಮ; ದರುಶನ: ನೋಡಲು; ಮನ: ಮನಸ್ಸು; ನೃಪ: ರಾಜ; ಚಿಂತಿಸು: ಯೋಚಿಸು; ನೇಮಿಸು: ಅಪ್ಪಣೆ ನೀಡು;

ಪದವಿಂಗಡಣೆ:
ಕರೆದು +ಬಾಗಿಲವರಿಗೆ+ ತನ್ನಯ
ಬರವನ್+ಅರುಹಿಸಲ್+ಅವರು +ರಾಯನ
ಹೊರೆಗೆ +ಬಂದರು +ನುಡಿದರ್+ಅಂಗೈ +ತಳದ +ಬಾಯ್ಗಳಲಿ
ಅರಸ+ ಬಿನ್ನಹ +ಮಾವದೇವರು
ದರುಶನಾರ್ಥಿಗಳ್+ಎನಲು +ಮನದಲಿ
ಕುರುನೃಪತಿ+ ಚಿಂತಿಸುತ+ ಬರಹೇಳೆಂದು +ನೇಮಿಸಿದ

ಅಚ್ಚರಿ:
(೧) ರಾಯ, ಅರಸ, ನೃಪತಿ – ಸಮನಾರ್ಥಕ ಪದಗಳು
(೨) ರಾಜನೊಂದಿಗೆ ಸೇವಕರು ಮಾತನಾಡುವ ಪರಿ – ರಾಯನ ಹೊರೆಗೆ ಬಂದರು ನುಡಿದರಂಗೈ ತಳದ ಬಾಯ್ಗಳಲಿ
(೩) ಶಕುನಿಯನ್ನು ಸೇವಕರು ಕರೆದ ಬಗೆ – ಮಾವದೇವರು

ನಿಮ್ಮ ಟಿಪ್ಪಣಿ ಬರೆಯಿರಿ