ಪದ್ಯ ೧೧: ದುರ್ಯೋಧನನು ಶಕುನಿಗೆ ಏನು ತಿಳಿಸಿದ?

ಮಾವ ನೀವ್ ಮರುಳಾದಿರೇ ನನ
ಗಾವ ರುಜೆಯಿಲ್ಲಂಗನೆಯರುಪ
ಜೀವಿಯೇ ನೀವರಿಯಿರೇ ಹಿಂದೀಸು ಕಾಲದಲಿ
ನೋವು ಬೇರಿಲ್ಲೆನಗೆ ನಿಳಯಕೆ
ನೀವು ಬಿಜಯಂಗೈವುದಂತ
ರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಶಕುನಿಯ ಮಾತುಗಳನ್ನು ಕೇಳಿ ದುರ್ಯೋಧನನು, ಮಾವ ನಿಮಗೆಲ್ಲೋ ಹುಚ್ಚು ಹಿಡಿದಿದೆಯೇ? ನನಗೆ ಯಾವ ರೋಗವೂ ಇಲ್ಲ. ನಾನು ಸ್ತ್ರೀಲೋಲನಲ್ಲವೆಂಬುದನ್ನು ನೀವು ಮೊದಲಿಂದಲೂ ತಿಳಿದಿದ್ದೀರಲ್ಲಾ? ನೀವು ನನ್ನ ಆಲಯಕ್ಕೆ ಬಂದು ಒಳಮನಸ್ಸಿನಲ್ಲಿ ಹುದುಗಿರುವ ಬೆಂಕಿಯನ್ನೇಕೆ ಕೆದರುವಿರಿ ಎಂದು ಹೇಳಿದನು.

ಅರ್ಥ:
ಮಾವ: ತಾಯಿಯ ಸಹೋದರ; ಮರುಳು: ಬುದ್ಧಿಭ್ರಮೆ, ಹುಚ್ಚು; ರುಜೆ: ರೋಗ; ಅಂಗನೆ: ಹೆಣ್ಣು; ಉಪಜೀವಿ: ಪರಾವಲಂಬನದಿಂದ ಜೀವಿಸುವ ಮನುಷ್ಯ; ಅರಿ: ತಿಳಿ; ಹಿಂದೆ: ಮೊದಲು; ಕಾಲ: ಸಮಯ; ನೋವು: ಬೇನೆ, ಶೂಲೆ; ನಿಳಯ: ಮನೆ; ಬಿಜಯಂಗೈ: ಆಗಮಿಸು; ಅಂತರ್ಭಾವ: ಒಳ ಅರ್ಥ; ವಹ್ನಿ: ಬೆಂಕಿ; ಬೆದಕು: ಕೆದಕು, ಕೆರೆತ, ಗೀರುವಿಕೆ; ಭೂಪ: ರಾಜ;

ಪದವಿಂಗಡಣೆ:
ಮಾವ +ನೀವ್ +ಮರುಳಾದಿರೇ+ ನನಗ್
ಆವ +ರುಜೆಯಿಲ್+ಅಂಗನೆಯರ್+ಉಪ
ಜೀವಿಯೇ +ನೀವ್+ಅರಿಯಿರೇ +ಹಿಂದ್+ಈಸು +ಕಾಲದಲಿ
ನೋವು +ಬೇರಿಲ್+ಎನಗೆ +ನಿಳಯಕೆ
ನೀವು+ ಬಿಜಯಂಗೈವುದ್+ಅಂತ
ರ್ಭಾವ +ವಹ್ನಿಯನೇಕೆ+ ಬೆದಕುವಿರೆಂದನಾ +ಭೂಪ

ಅಚ್ಚರಿ:
(೧) ತನ್ನ ಮನಸ್ಸು ಕುದಿಯುತ್ತಿದೆ ಎಂದು ಹೇಳುವ ಪರಿ – ಅಂತರ್ಭಾವ ವಹ್ನಿಯನೇಕೆ ಬೆದಕುವಿರೆಂದನಾ ಭೂಪ

ನಿಮ್ಮ ಟಿಪ್ಪಣಿ ಬರೆಯಿರಿ