ಪದ್ಯ ೩: ದುರ್ಯೋಧನನು ಉಷಾಕಾಲದ ಮಂಗಳವಾದ್ಯಗಳನ್ನೇಕೆ ನಿಲ್ಲಿಸಿದನು?

ಭಾನುಮತಿ ಬರೆ ಮುರಿದ ಮುಸುಕಿನ
ಮೌನಿ ನೂಕಿದನಿರುಳನುದಯದ
ನೂನ ಮಂಗಳಪಟದ ಶಂಖಧ್ವನಿಯ ಮಾಣಿಸಿದ
ಭಾನುವಿಂಗರ್ಘ್ಯಾದಿ ಕೃತ್ಯವ
ನೇನುವನು ಮನ್ನಿಸದೆ ಚಿತ್ತದೊ
ಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ (ಸಭಾ ಪರ್ವ, ೧೩ ಸಂಧಿ, ೩ ಪದ್ಯ)

ತಾತ್ಪರ್ಯ:
ಭಾನುಮತಿ ಬರಲು ಮುಸುಕನ್ನು ತೆರದನೇ ಹೊರತು ಆಕೆಯ ಜೊತೆ ಮಾತಾಡಲಿಲ್ಲ. ರಾತ್ರಿಯೆಲ್ಲಾ ಮೌನದಲ್ಲೇ ಕಳೆದನು. ಬೆಳಗಿನ ಉಷಾಕಾಲದಲ್ಲಿ ಶಂಖ ಪಟಹ ಮೊದಲಾದ ಮಂಗಳವಾದ್ಯಗಳ ಧ್ವನಿಯನ್ನು ಮಾಡಕೂಡದೆಂದು ಆದೇಶಿಸಿದನು. ಸೂರ್ಯನಿಗೆ ಬೆಳಗಿನ ಅರ್ಘ್ಯವೇ ಮೊದಲಾದ ಏನನ್ನೂ ಕೊಡದೆ ಅತಿಶಯದ ಕೋಪದ ಭಾರದಲ್ಲಿದ್ದನು.

ಅರ್ಥ:
ಬರೆ: ಆಗಮಿಸಲು; ಮುರಿ: ಸೀಳು; ಮುಸುಕು: ಹೊದಿಕೆ; ಮೌನ: ಮಾತಿಲ್ಲದ ಸ್ಥಿತಿ, ಸುಮ್ಮನಿರುವಿಕೆ; ನೂಕು: ತಳ್ಳು; ಇರುಳು: ರಾತ್ರಿ; ಉದಯ: ಹುಟ್ಟು; ನೂನ: ನ್ಯೂನತೆ, ಭಂಗ; ಮಂಗಳ: ಶುಭ; ಪಟ: ಧ್ವಜ, ಬಾವುಟ; ಶಂಖ: ಕಂಬು; ಧ್ವನಿ: ರವ, ಶಬ್ದ; ಮಾಣಿಸು: ನಿಲ್ಲುವಂತೆ ಮಾಡು, ನಿಲ್ಲಿಸು; ಭಾನು: ಸೂರ್ಯ; ಅರ್ಘ್ಯ: ನೀರು; ಕೃತ್ಯ: ಕೆಲಸ; ಆದಿ: ಮುಂತಾದ; ಮನ್ನಿಸು: ಒಪ್ಪು, ಅಂಗೀಕರಿಸು; ಚಿತ್ತ: ಮನಸ್ಸು; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಭೂಪ: ರಾಜ; ಖತಿ: ರೇಗುವಿಕೆ, ಕೋಪ; ಭಾರ: ಹೊರೆ;

ಪದವಿಂಗಡಣೆ:
ಭಾನುಮತಿ +ಬರೆ +ಮುರಿದ +ಮುಸುಕಿನ
ಮೌನಿ +ನೂಕಿದನ್+ಇರುಳನ್+ಉದಯದ
ನೂನ+ ಮಂಗಳಪಟದ +ಶಂಖ+ಧ್ವನಿಯ +ಮಾಣಿಸಿದ
ಭಾನುವಿಂಗ್+ಅರ್ಘ್ಯಾದಿ +ಕೃತ್ಯವನ್
ಏನುವನು+ ಮನ್ನಿಸದೆ+ ಚಿತ್ತದೊಳ್
ಏನ+ ನೆನೆದನೊ +ಭೂಪನಿದ್ದನು+ ಖತಿಯ+ ಭಾರದಲಿ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುರಿದ ಮುಸುಕಿನ ಮೌನಿ
(೨) ಭಾನುಮತಿ, ಭಾನು, ಭೂಪ – ಭ ಕಾರದ ಪದಗಳ ಬಳಕೆ
(೩) ದುರ್ಯೋಧನನ ಸ್ಥಿತಿ – ಚಿತ್ತದೊಳೇನ ನೆನೆದನೊ ಭೂಪನಿದ್ದನು ಖತಿಯ ಭಾರದಲಿ

ನಿಮ್ಮ ಟಿಪ್ಪಣಿ ಬರೆಯಿರಿ