ಪದ್ಯ ೩೪: ಧರ್ಮಜನು ಉಳಿದ ರಾಜರನ್ನು ಹೇಗೆ ಬೀಳ್ಕೊಟ್ಟನು?

ಮುನಿಪ ಕಳುಹಿಸಿಕೊಂಡು ಬದರೀ
ವನಕೆ ತಿರುಗಿದನತ್ತಲಿತ್ತಲು
ಜನಪ ಬಂದನು ಬಳಿಕ ಮಯನಿರ್ಮಿತ ಮಹಾಸಭೆಗೆ
ಮುನಿಗಳುಳಿದವರನು ಮಹೀಸುರ
ಜನಸಹಿತ ಭೂಪಾಲಶೇಷವ
ನನುನಯದಿ ಮಿಗೆ ಸತ್ಕರಿಸಿ ಬೀಳ್ಕೊಟನುಚಿತದಲಿ (ಸಭಾ ಪರ್ವ, ೧೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ವೇದವ್ಯಾಸರು ಪಾಂಡವರೆಲ್ಲರಿಗೂ ಬುದ್ಧಿಮಾತನ್ನು ಹೇಳಿ ತಮ್ಮ ಬದರೀಕಾಶ್ರಮಕ್ಕೆ ತೆರಳಿದರು. ಧರ್ಮರಾಯನು ಮಯನು ನಿರ್ಮಿಸಿದ ಮಹಾ ಸಭಾಮಂಟಪಕ್ಕೆ ಬಂದು ಅಲ್ಲಿ ನೆರೆದಿದ್ದ ಉಳಿದ ರಾಜರನ್ನು ಬ್ರಾಹ್ಮಣರನ್ನು ಸರಿಯಾದ ರೀತಿಯಲ್ಲಿ ಸತ್ಕರಿಸಿ ಅವರೆಲ್ಲರನ್ನೂ ಕಳುಹಿಸಿಕೊಟ್ಟನು.

ಅರ್ಥ:
ಮುನಿಪ: ಋಷಿ; ಕಳುಹಿಸು: ಬೀಳ್ಕೊಡು; ವನ: ಬನ, ಕಾಡು; ತಿರುಗು: ಮರಳು; ಇತ್ತಲು: ಈ ಕಡೆ; ಜನಪ: ರಾಜ;ಬಂದು: ಆಗಮಿಸು; ಬಳಿಕ: ನಂತರ; ನಿರ್ಮಿತ: ರಚಿಸಿದ, ನಿರ್ಮಿಸಿದ; ಮಹಾ: ದೊಡ್ಡ; ಸಭೆ: ಓಲಗ; ಮುನಿ: ಋಷಿ; ಉಳಿದ: ಮಿಕ್ಕ; ಮಹೀಸುರ: ರಾಜ; ಜನ: ಮಾನವರ ಗುಂಪು; ಸಹಿತ: ಜೊತೆ; ಭೂಪಾಲ: ರಾಜ; ಶೇಷ: ಉಳಿದ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಮಿಗೆ: ಅಧಿಕವಾಗಿ; ಸತ್ಕರಿಸು: ಗೌರವಿಸು; ಬೀಳ್ಕೊಡು: ಕಳುಹಿಸು; ಉಚಿತ: ಸರಿಯಾದ ರೀತಿ;

ಪದವಿಂಗಡಣೆ:
ಮುನಿಪ +ಕಳುಹಿಸಿಕೊಂಡು +ಬದರೀ
ವನಕೆ+ ತಿರುಗಿದನ್+ಅತ್ತಲ್+ಇತ್ತಲು
ಜನಪ+ ಬಂದನು +ಬಳಿಕ +ಮಯನಿರ್ಮಿತ +ಮಹಾಸಭೆಗೆ
ಮುನಿಗಳ್+ಉಳಿದವರನು+ ಮಹೀಸುರ
ಜನಸಹಿತ+ ಭೂಪಾಲ+ಶೇಷವನ್
ಅನುನಯದಿ +ಮಿಗೆ +ಸತ್ಕರಿಸಿ+ ಬೀಳ್ಕೊಟನ್+ಉಚಿತದಲಿ

ಅಚ್ಚರಿ:
(೧) ಜನಪ, ಭೂಪಾಲ – ಸಮನಾರ್ಥಕ ಪದ
(೨) ಮುನಿಪ, ಜನಪ – ಪ್ರಾಸ ಪದ
(೩) ಮ ಕಾರದ ಸಾಲು ಪದಗಳು – ಮಯನಿರ್ಮಿತ ಮಹಾಸಭೆಗೆ ಮುನಿಗಳುಳಿದವರನು ಮಹೀಸುರ

ನಿಮ್ಮ ಟಿಪ್ಪಣಿ ಬರೆಯಿರಿ