ಪದ್ಯ ೩೦: ವ್ಯಾಸರು ಧರ್ಮಜನಿಗೆ ಯಾವ ಉಪದೇಶವನ್ನು ನೀಡಿದರು?

ಅರಿದಿಹುದು ನೀನಾಪ್ತ ವಚನವ
ಮರೆಯದಿರು ವೇದೋಕ್ತ ಕರ್ಮದ
ಹೊರಿಗೆ ನಿನ್ನದು ನಿನ್ನ ಹೊದ್ದದು ಕಲುಷ ಕಲಿಮಲದ
ಕರುಬರೀ ಕೌರವರು ಮಖವಿದು
ಮೆರೆದುದದ್ಭುತವಾಗಿ ನಿನ್ನನು
ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ (ಸಭಾ ಪರ್ವ, ೧೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ವ್ಯಾಸರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ, ಈ ರಾಜಸೂಯ ಯಾಗವು ಅತ್ಯದ್ಭುತವಾಗಿ ನಡೆದಿದೆ. ಇದನ್ನು ನಿನ್ನ ದಾಯಾದಿಗಳಾದ ಕೌರವರು ಸಹಿಸರು, ಅವರು ಹೊಟ್ಟೆಕಿಚ್ಚಿನಿಂದ ನೊಂದಿದ್ದಾರೆ. ನಿನ್ನನ್ನು ಹೇಗಾದರೂ ಭಂಗಕ್ಕೊಳಪಡಿಸಿ ಮುರಿಯುತ್ತಾರೆ. ನಿನ್ನ ಏಳಿಗೆಯನ್ನು ಅವರು ಸೈರಿಸುವುದಿಲ್ಲ. ನೀನು ವೇದೋಕ್ತಕರ್ಮಾಅರಣೆಯನ್ನು ಬಿಡಬೇಡ. ಆಪ್ತವಾಕ್ಯವನ್ನು ಮರೆಯಬೇಡ. ಕಲಿಕಲ್ಮಷವು ನಿನ್ನ ಹತ್ತಿರಕ್ಕೂ ಸುಳಿಯುವುದಿಲ್ಲ ಎಂದು ಹೇಳಿದರು.

ಅರ್ಥ:
ಅರಿ: ತಿಳಿ;ಆಪ್ತ: ಹತ್ತಿರ; ವಚನ: ಮಾತು, ನುಡಿ; ಮರೆ: ನೆನಪಿನಿಂದ ದೂರ ತಳ್ಳು; ವೇದ: ಶೃತಿ; ಉಕ್ತಿ: ನುಡಿದ; ಕರ್ಮ: ಕೆಲಸ, ಕಾರ್ಯ; ಹೊರಿಗೆ: ಭಾರ, ಹೊರೆ; ಹೊದ್ದು: ಹೊಂದು, ಸೇರು, ತಬ್ಬಿಕೊ; ಕಲುಷ: ಕೆಟ್ಟ; ಮಲ: ಕೊಳೆ; ಪಾಪ; ಕರುಬು: ಹೊಟ್ಟೆಕಿಚ್ಚು ಪಡು; ಮಖ: ಯಾಗ; ಮೆರೆ: ಪ್ರಕಾಶಿಸು, ಹೊಳೆ; ಅದ್ಭುತ: ವಿಸ್ಮಯ, ಆಶ್ಚರ್ಯ; ಮುರಿ: ಸೀಳು; ಸೈರಿಸು: ತಾಳು, ಸಹಿಸು;

ಪದವಿಂಗಡಣೆ:
ಅರಿದಿಹುದು +ನೀನ್+ಆಪ್ತ +ವಚನವ
ಮರೆಯದಿರು+ ವೇದೋಕ್ತ +ಕರ್ಮದ
ಹೊರಿಗೆ+ ನಿನ್ನದು+ ನಿನ್ನ +ಹೊದ್ದದು +ಕಲುಷ +ಕಲಿಮಲದ
ಕರುಬರೀ+ ಕೌರವರು+ ಮಖವಿದು
ಮೆರೆದುದ್+ಅದ್ಭುತವಾಗಿ +ನಿನ್ನನು
ಮುರಿವರಲ್ಲದೆ+ ನಿಮ್ಮವರು +ಸೈರಿಸುವರಲ್ಲೆಂದ

ಅಚ್ಚರಿ:
(೧) ಕೌರವರ ಬಗ್ಗೆ ಎಚ್ಚರದ ನುಡಿ – ಕರುಬರೀ ಕೌರವರು; ನಿನ್ನನು ಮುರಿವರಲ್ಲದೆ ನಿಮ್ಮವರು ಸೈರಿಸುವರಲ್ಲೆಂದ

ನಿಮ್ಮ ಟಿಪ್ಪಣಿ ಬರೆಯಿರಿ