ಪದ್ಯ ೨೮: ಧರ್ಮಜನು ವ್ಯಾಸರ ಬಳಿ ಏನನ್ನು ಕೇಳಿದನು?

ಆ ಮುಕುಂದನ ನೆನಹು ನಮಗೆ ನಿ
ರಾಮಯವು ನೀವಿರಲು ಚಿಂತಾ
ವೈಮನಸ್ಯದ ವೇಧೆ ಮುರಿದುದು ಸಾಕದಂತಿರಲಿ
ಈ ಮಹೋತ್ಪಾತ ಪ್ರಬಂಧ ವಿ
ರಾಮ ಕರ್ಮವ ಬೆಸಸಿಯೆನೆ ನಗು
ತಾ ಮುನೀಶ್ವರ ನುಡಿದನವನೀಪತಿ ಶಿರೋಮಣಿಗೆ (ಸಭಾ ಪರ್ವ, ೧೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ರಾಜರಲ್ಲಿ ಶ್ರೇಷ್ಠನಾದ ಧರ್ಮಜನಿಗೆ ಋಷಿಗಳಲ್ಲಿ ಶ್ರೇಷ್ಠರಾದ ವ್ಯಾಸಮಹರ್ಷಿಗಳನ್ನು ಉದ್ದೇಶಿಸುತ್ತಾ, ನೀವು ಇರುವುದರಿಂದ ನನಗಿದ್ದ ಚಿಂತೆ, ನೋವು ಮಾಯವಾಗಿದೆ. ಶ್ರೀಕೃಷ್ಣನ ನಾಮ ಸ್ಮರಣೆಯು ನಮಗೆ ಸದಾ ನೆಮ್ಮದಿಯನ್ನುಂಟುಮಾಡುತ್ತದೆ. ಅದು ಹಾಗಿರಲಿ, ಈ ಮಹಾ ಉತ್ಪಾತಗಳ ದುಷ್ಪರಿಣಾಮವನ್ನು ನಿಲ್ಲಿಸುವ ಕರ್ಮವನ್ನು ತಿಳಿಸಿ ಎಂದನು, ವ್ಯಾಸರು ಆಗ ಧರ್ಮಜನಿಗೆ ಹೀಗೆ ಹೇಳಿದರು.

ಅರ್ಥ:
ನೆನಹು: ನೆನಪು; ನಿರಾಮಯ: ನೆಮ್ಮದಿ, ಸಂತೋಷ; ಚಿಂತೆ: ಯೋಚನೆ; ವೈಮನಸ್ಯ: ಅಪಾರವಾದ ದುಃಖ; ವೇಧೆ: ಕಷ್ಟ, ಬಾಧೆ; ಮುರಿ: ಸೀಳು; ಸಾಕು: ನಿಲ್ಲಿಸು, ತಡೆ; ಮಹಾ: ದೊಡ್ಡ; ಉತ್ಪಾತ: ಅಪಶಕುನ; ಪ್ರಬಂಧ: ಬಾಂಧವ್ಯ, ಕಟ್ಟು, ವ್ಯವಸ್ಥೆ; ವಿರಾಮ: ಬಿಡುವು, ವಿಶ್ರಾಂತಿ; ಕರ್ಮ: ಕಾರ್ಯ, ಕೆಲಸ; ಬೆಸಸು: ಹೇಳು, ಆಜ್ಞಾಪಿಸು; ನಗು: ಸಂತಸ; ಮುನಿ: ಋಷಿ; ನುಡಿ: ಮಾತಾಡು, ವಾಕ್; ಅವನೀಪತಿ: ರಾಜ; ಶಿರೋಮಣಿ: ಶ್ರೇಷ್ಠನಾದ;

ಪದವಿಂಗಡಣೆ:
ಆ+ ಮುಕುಂದನ+ ನೆನಹು +ನಮಗೆ +ನಿ
ರಾಮಯವು +ನೀವಿರಲು +ಚಿಂತಾ
ವೈಮನಸ್ಯದ+ ವೇಧೆ +ಮುರಿದುದು +ಸಾಕ್+ಅದಂತಿರಲಿ
ಈ +ಮಹ+ಉತ್ಪಾತ +ಪ್ರಬಂಧ +ವಿ
ರಾಮ +ಕರ್ಮವ +ಬೆಸಸಿಯೆನೆ+ ನಗು
ತಾ +ಮುನೀಶ್ವರ+ ನುಡಿದನ್+ಅವನೀಪತಿ+ ಶಿರೋಮಣಿಗೆ

ಅಚ್ಚರಿ:
(೧) ವ್ಯಾಸರನ್ನು ಮುನೀಶ್ವರ, ಧರ್ಮಜನನ್ನು ಅವನೀಪತಿ ಶಿರೋಮಣಿ ಎಂದು ಹೇಳಿರುವುದು
(೨) ನ ಕಾರದ ಸಾಲು ಪದ – ನೆನಹು ನಮಗೆ ನಿರಾಮಯವು ನೀವಿರಲು

ನಿಮ್ಮ ಟಿಪ್ಪಣಿ ಬರೆಯಿರಿ