ನುಡಿಯದಿರಸತ್ಯವನು ರಾಜ್ಯವ
ಬಿಡು ವಿಭಾಡಿಸಿ ನಿನ್ನ ವಧುವಿನ
ಮುಡಿಗೆ ಹಾಯ್ದರೆ ನೀನಧರ್ಮದ ತಡಿಯನಡರದಿರು
ಒಡಲುಗೂಡಿ ಸಮಸ್ತ ಧನವಿದು
ಕೆಡುವುದಗ್ಗದ ಮೋಕ್ಷಲಕ್ಷ್ಮಿಯ
ಮುಡಿಗೆ ಹಾಯ್ದೊಡೆ ಸತ್ಯವೊಂದನೆ ನಂಬು ನೀನೆಂದ (ಸಭಾ ಪರ್ವ, ೧೨ ಸಂಧಿ, ೩೧ ಪದ್ಯ)
ತಾತ್ಪರ್ಯ:
ವೇದವ್ಯಾಸರು ಧರ್ಮಜನನ್ನು ಎಚ್ಚರಿಸುತ್ತಾ, ಅಸತ್ಯವನ್ನು ಎಂದಿಗೂ ಆಡಬೇಡ, ರಾಜ್ಯವನ್ನು ಕಳೆದುಕೊಳ್ಲಲು ಹೆದರಬೇಡ. ದ್ರೌಪದಿಯ ಮುಡಿಯನ್ನು ಹಿಡಿದೆಳೆದರೂ ನೀನು ಅಧರ್ಮಕ್ಕೆ ಮನಸ್ಸು ಕೊಡಬೇಡ. ಸಮಸ್ತ ಐಶ್ವರ್ಯವೂ ದೇಹವೂ ನಾಶವಾಗುವಂತಹವು. ಮೋಕ್ಷಲಕ್ಷ್ಮಿಯನ್ನು ಪಡೆಯಲು ಸತ್ಯವೊಂದೇ ಮಾರ್ಗ ಅದರ ಆಶ್ರಯವನ್ನು ಪಡೆ ಎಂದು ವ್ಯಾಸರು ತಿಳಿಸಿದರು.
ಅರ್ಥ:
ಅಸತ್ಯ: ಸುಳ್ಳು; ನುಡಿ: ಮಾತು; ರಾಜ್ಯ: ರಾಷ್ಟ್ರ; ಬಿಡು: ತೊರೆ; ವಿಭಾಡ: ನಾಶಮಾಡುವವನು, ಸೋಲಿಸುವವನು; ವಧು: ಹೆಣ್ಣು, ಹೆಂಡತಿ; ಮುಡಿ: ತಲೆ; ಹಾಯ್ಕು: ಹಾಕು; ಅಧರ್ಮ: ಧರ್ಮಕ್ಕೆ ವಿರುದ್ಧವಾದುದು, ನ್ಯಾಯವಲ್ಲದುದು; ತಡಿ:ದಡ, ತಟ, ದಂಡೆ; ಅಡರು: ಆಸರೆ; ಒಡಲು: ದೇಹ; ಸಮಸ್ತ: ಎಲ್ಲಾ; ಧನ: ಐಶ್ವರ್ಯ; ಕೆಡು: ಹಾಳಾಗು; ಅಗ್ಗ: ಶ್ರೇಷ್ಠ; ಮೋಕ್ಷ: ಬಿಡುಗಡೆ, ಮುಕ್ತಿ, ನಿರ್ವಾಣ; ಮುಡಿ: ಶಿರ, ತಲೆ; ಸತ್ಯ: ದಿಟ; ನಂಬು: ವಿಶ್ವಾಸವಿಡು;
ಪದವಿಂಗಡಣೆ:
ನುಡಿಯದಿರ್+ಅಸತ್ಯವನು +ರಾಜ್ಯವ
ಬಿಡು +ವಿಭಾಡಿಸಿ+ ನಿನ್ನ+ ವಧುವಿನ
ಮುಡಿಗೆ +ಹಾಯ್ದರೆ +ನೀನ್+ಅಧರ್ಮದ +ತಡಿಯನ್+ಅಡರದಿರು
ಒಡಲುಗೂಡಿ +ಸಮಸ್ತ +ಧನವಿದು
ಕೆಡುವುದ್+ಅಗ್ಗದ +ಮೋಕ್ಷಲಕ್ಷ್ಮಿಯ
ಮುಡಿಗೆ +ಹಾಯ್ದೊಡೆ +ಸತ್ಯವೊಂದನೆ+ ನಂಬು +ನೀನೆಂದ
ಅಚ್ಚರಿ:
(೧) ಅಸತ್ಯ, ಸತ್ಯ – ವಿರುದ್ಧ ಪದಗಳು
(೨) ವಧುವಿನ ಮುಡಿಗೆ, ಮೋಕ್ಷಲಕ್ಷ್ಮಿಯ ಮುಡಿಗೆ – ಪದಗಳ ಬಳಕೆ