ಅರಸ ಚಿತ್ತವಿಸೊಂದು ಲಕ್ಷದ
ಧರಣಿಯಮರರ ಭೋಜನಾಂತಕೆ
ಮೊರೆವುಯೊಂದೇ ಬಾರಿ ಶಂಖಧ್ವನಿ ಛಡಾಲದಲಿ
ಪರುಠವಣೆಯಿದು ರಾಜಸೂಯಾ
ಧ್ವರದ ಮೊದಲವಸಾನ ಪರಿಯಂ
ತರದೊಳೋರಂದದಲಿ ಹಗಲಿರುಳೂದಿತನವರತ (ಸಭಾ ಪರ್ವ, ೧೨ ಸಂಧಿ, ೪ ಪದ್ಯ)
ತಾತ್ಪರ್ಯ:
ಜನಮೇಜಯ ರಾಜ ಕೇಳು, ರಾಜಸೂಯಯಾಗದಲ್ಲಿ ಒಂದು ಲಕ್ಷ ಬ್ರಾಹ್ಮಣರ ಸಂತರ್ಪಣೆ ಮುಗಿದರೆ ಒಂದು ಬಾರಿ ಶಂಖವನ್ನು ಊದುತ್ತಿದ್ದರು. ರಾಜಸೂಯಯಾಗ ಆರಂಭವಾಗಿ ಮುಗಿಯುವವರೆಗೂ ಹಗಲು ರಾತ್ರಿ ಎನ್ನದೆ ಶಂಖನಾದವು ಕೇಳಿಬರುತ್ತಿತ್ತು.
ಅರ್ಥ:
ಅರಸ: ರಾಜ; ಚಿತ್ತವಿಸು: ಗಮನವಿಟ್ಟು ಕೇಳು; ಧರಣಿ: ಭೂಮಿ; ಧರಣಿಯಮರ: ಬ್ರಾಹ್ಮಣ; ಭೋಜನ: ಊಟ; ಅಂತ: ಮುಕ್ತಾಯ; ಮೊರೆ: ದುಂಬಿಯ ಧ್ವನಿ, ಝೇಂಕಾರ; ಬಾರಿ: ಸಲ; ಶಂಖ: ಸಮುದ್ರದಲ್ಲಿ ಸಿಗುವ ಒಂದು ಬಗೆಯ ಚಿಪ್ಪು; ಧ್ವನಿ: ರವ, ಕೂಗು; ಛಡಾಳ: ಹೆಚ್ಚಳ, ಆಧಿಕ್ಯ; ಪರುಠವ: ವಿಸ್ತಾರ, ಹರಹು; ಅಧ್ವರ: ಯಾಗ; ಅವಸಾನ: ಕೊನೆ; ಪರಿ: ರೀತಿ; ಅಂತರ: ವ್ಯತ್ಯಾಸ, ಭೇದ; ಓರಂದ: ಒಂದೇ ರೀತಿ, ಸಮಾನ; ಹಗಲು: ಬೆಳಗ್ಗೆ; ಇರುಳು: ರಾತ್ರಿ; ಊದು: ಕೂಗು, ಧ್ವನಿ; ಅನವರತ: ಯಾವಾಗಲು;
ಪದವಿಂಗಡಣೆ:
ಅರಸ +ಚಿತ್ತವಿಸ್+ಒಂದು +ಲಕ್ಷದ
ಧರಣಿ+ಅಮರರ +ಭೋಜನಾಂತಕೆ
ಮೊರೆವು+ಒಂದೇ +ಬಾರಿ +ಶಂಖಧ್ವನಿ+ ಛಡಾಲದಲಿ
ಪರುಠವಣೆಯಿದು+ ರಾಜಸೂಯ
ಅಧ್ವರದ +ಮೊದಲ್+ಅವಸಾನ +ಪರಿಯಂ
ತರದೊಳ್+ಓರಂದದಲಿ +ಹಗಲ್+ಇರುಳ್+ಊದಿತ್+ಅನವರತ
ಅಚ್ಚರಿ:
(೧) ಅಂತ, ಅವಸಾನ – ಕೊನೆ ಎಂದು ಅರ್ಥೈಸುವ ಪದ