ಪದ್ಯ ೮೦: ರಾಜರ ಗುಂಪು ಶಿಶುಪಾಲನ ಸಾವಿಗೆ ಹೇಗೆ ಪ್ರತಿಕ್ರಯಿಸಿತು?

ಈಸು ಹಿರಿದೆಲ್ಲೆಂದು ಕೆಲಬರು
ಲೇಸ ಮಾಡಿದನಸುರ ರಿಪುವಿನ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸು ದಿನ ಬದುಕುವರು ಲೇಸಾ
ಯ್ತೀ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ (ಸಭಾ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಅಲ್ಲಿದ್ದ ರಾಜರಲ್ಲಿ ಕೆಲವರು ಇದೇನೂ ಹೆಚ್ಚಲ್ಲ ಎಂದು ನುಡಿದರೆ, ಇನ್ನೂ ಕೆಲವರು ಶಿಶುಪಾಲನಿಗೆ ಶ್ರೀಕೃಷ್ಣನು ತಕ್ಕ ಶಾಸ್ತಿಯನ್ನೇ ಮಾಡಿದನು ಎಂದು ಅಭಿಪ್ರಾಯಪಟ್ಟರು. ಶಿಶುಪಾಲನು ಇಷ್ಟು ಸನ್ಮಾರ್ಗಬಾಹಿರನೆಂದು ನಮಗೆ ತಿಳಿದಿರಲಿಲ್ಲ ಎಂದು ಕೆಲವರು ಮಾತಾಡಿದರು, ಇನ್ನೂ ಕೆಲವರು ಕೃಷ್ಣನ ಮೇಲೆ ದ್ವೇಷ ಕಟ್ಟಿಕೊಂಡವರು ಎಷ್ಟು ದಿನ ಬದುಕಲು ಸಾಧ್ಯ, ಶಿಶುಪಾಲನಿಗೆ ಸರಿಯಾದುದಾಯಿತು ಎಂದು ನಗುತ್ತಿದ್ದರು.

ಅರ್ಥ:
ಈಸು: ಇಷ್ಟು; ಹಿರಿ: ಹೆಚ್ಚು, ದೊಡ್ಡದು; ಕೆಲಬರು: ಸ್ವಲ್ಪ ಮಂದಿ; ಲೇಸು: ಒಳಿತು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಬಾಹಿರ: ಹೊರಗಿನವ, ಹೀನಮನುಷ್ಯ; ಅರಿ: ತಿಳಿ; ಐಸಲೇ: ಅಲ್ಲವೇ; ಮುನಿ: ಕೋಪ; ಏಸು: ಎಷ್ಟು; ದಿನ: ದಿವಸ, ವಾರ; ಬದುಕು: ಜೀವಿಸು; ಸುನೀತ: ಶಿಶುಪಾಲ; ನಗು: ಸಂತಸ; ನೃಪ: ರಾಜ; ಸ್ತೋಮ: ಗುಂಪು;

ಪದವಿಂಗಡಣೆ:
ಈಸು +ಹಿರಿದೆಲ್ಲೆಂದು +ಕೆಲಬರು
ಲೇಸ +ಮಾಡಿದನ್+ಅಸುರರಿಪುವ್+ಇನನ್
ಈಸು +ಬಾಹಿರನೆಂದ್+ಅರಿಯೆವಾವೆಂದು+ ಕೆಲಕೆಲರು
ಐಸಲೇ +ಕೃಷ್ಣಂಗೆ +ಮುನಿದವರ್
ಏಸು +ದಿನ +ಬದುಕುವರು +ಲೇಸಾ
ಯ್ತೀ +ಸುನೀತಂಗೆಂದು +ನಗುತಿರ್ದುದು +ನೃಪಸ್ತೋಮ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದಗಳು
(೨) ಕೆಲಕೆಲರು, ಕೆಲಬರು – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ