ಪದ್ಯ ೪೭: ಕೃಷ್ಣನನ್ನು ಅಗ್ರಪೂಜೆಗೆ ಆಯ್ಕೆಮಾಡಿದ್ದು ಯಾವುದರ ಸಮವೆಂದು ಶಿಶುಪಾಲನು ಹೇಳಿದನು?

ಕುಲದಲಧಿಕರು ಶೌರ್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ್ಮಲಿನರಾಚಾರದಲಿ ಕೋವಿದರಖಿಳಕಳೆಗಳಲಿ
ಇಳೆಯವಲ್ಲಭರಿನಿಬರನು ನೀ
ಕಳೆದು ನೋಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಉತ್ತಮ ಕುಲ, ಅಧಿಕ ಶೌರ್ಯ, ಉನ್ನತಶೀಲ, ನಿರ್ಮಲವಾದ ಆಚಾರ, ಅಖಿಲಲೆಗಲಲ್ಲೂ ಕೌಶಲ್ಯಗಳಿರುವ ಎಲ್ಲ ರಾಜರನ್ನೂ ಬಿಟ್ಟು ಕೃಷ್ಣನನ್ನು ಅಗ್ರಪೂಜೆಗೆ ಆಯ್ಕೆಮಾಡಿದ್ದು, ಸುಗಂಧಮಯ ಹೂವಿನ ತೋಟವನ್ನು ಬಿಟ್ಟು ನೊಣವು ಬಗಿನಿ ಮರದ ಮೇಲೆ ಕುಳಿತ ಹಾಗಾಯಿತು ಎಂದು ಶಿಶುಪಾಲನು ಹೇಳಿದನು.

ಅರ್ಥ:
ಕುಲ: ವಂಶ; ಅಧಿಕ: ಹೆಚ್ಚು, ಮೇಲೆ; ಶೌರ್ಯ: ಪರಾಕ್ರಮ; ವೆಗ್ಗಳ: ಅಧಿಕ, ಹೆಚ್ಚು; ಶೀಲ: ನಡತೆ, ಸ್ವಭಾವ; ಉನ್ನತ: ಹಿರಿಯ, ಉತ್ತಮ; ನಿರ್ಮಲ: ಶುದ್ಧತೆ, ಸ್ವಚ್ಛತೆ; ಮಲಿನ: ಕೊಳೆ, ಹೊಲಸು; ಆಚಾರ: ಕಟ್ಟುಪಾಡು, ಸಂಪ್ರದಾಯ; ಕೋವಿದ: ಪಂಡಿತ; ಅಖಿಳ: ಎಲ್ಲಾ, ಸರ್ವ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಇಳೆ: ಭೂಮಿ; ವಲ್ಲಭ: ಒಡೆಯ; ಇನಿಬರು: ಇಷ್ಟುಜನ; ಕಳೆ: ಹೋಗ ಲಾಡಿಸು; ನೆರೆ: ಗುಂಪು; ಹೂತ: ಹೂಬಿಟ್ಟಿರುವ; ವನ: ಬನ, ಕಾಡು, ತೋಟ; ಹಳಿ: ನಿಂದೆ; ಹಗಿನು: ಗೊಂದು, ಅಂಟು; ಎರಗು: ಬಾಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಕುಲದಲ್+ಅಧಿಕರು +ಶೌರ್ಯದಲಿ +ವೆ
ಗ್ಗಳರು +ಶೀಲದಲ್+ಉನ್ನತರು +ನಿ
ರ್ಮಲಿನರ್+ಆಚಾರದಲಿ+ ಕೋವಿದರ್+ಅಖಿಳ +ಕಳೆಗಳಲಿ
ಇಳೆಯ+ವಲ್ಲಭರ್+ಇನಿಬರನು +ನೀ
ಕಳೆದು +ನೋಣ +ನೆರೆ +ಹೂತ +ವನವನು
ಹಳಿದು +ಹಗಿನಿಂಗ್+ಎರಗುವವೊಲಾಯ್ತೆಂದನಾ +ಚೈದ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೋಣ ನೆರೆ ಹೂತ ವನವನು ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ
(೨) ಅಧಿಕರು, ವೆಗ್ಗಳರು, ಉನ್ನತರು, ಕೋವಿದ, ವಲ್ಲಭರು – ಪ್ರಶಂಶಿಸುವ ಪದಗಳ ಪ್ರಯೋಗ

ನಿಮ್ಮ ಟಿಪ್ಪಣಿ ಬರೆಯಿರಿ